ಚಿಂತಾಮಣಿ: ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ. ಸೋಂಕನ್ನು ತಡೆಗಟ್ಟಲು ಕಾರ್ಯನಿರ್ವಹಿಸಬೇಕಾದ ಸರ್ಕಾರ ಅಧಿಕಾರದ ರಾಜಕೀಯದಲ್ಲಿ ಕೆಸರೆರಚಾಟದಲ್ಲಿ ತೊಡಗಿದೆ. ಜನರ ಜೀವಕ್ಕಿಂತ ಅವರಿಗೆ ಅಧಿಕಾರ ದಾಹ ಮುಖ್ಯವಾಗಿದೆ. ಹಗಲು ರಾತ್ರಿ ಜಗಳದಲ್ಲೇ ತಂತ್ರ-ಪ್ರತಿತಂತ್ರಗಳನ್ನು ರೂಪಿಸಿಕೊಂಡು ಕಿತ್ತಾಡುತ್ತಿದ್ದಾರೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಗೋಪಲ್ಲಿ ಮಂಜು
ಆರೋಪಿಸಿದರು.
ತಾಲ್ಲೂಕಿನ ಕೈವಾರದ ಸಮೀಪವಿರುವ ಚೈತನ್ಯ ವೃದ್ಧಾಶ್ರಮದ ವೃದ್ಧರಿಗೆ ಶನಿವಾರ ಯೂತ್ ಕಾಂಗ್ರೆಸ್ ವತಿಯಿಂದ ಮಧ್ಯಾಹ್ನದ ಊಟ ಹಾಗೂ ಕೋವಿಡ್ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಕೊರೊನಾ ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೊಂದರೆಗೆ ಒಳಗಾದ ಅಸಹಾಯಕರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ತನ್ನ ಹಿಂದಿನ ಗತವೈಭವಕ್ಕೆ ಮರಳುತ್ತದೆ. ಬಿಜೆಪಿಯ ನಾಯಕರ ಕಿತ್ತಾಟದ ರಂಪಾಟದಿಂದ ಜನರು ತೀವ್ರವಾಗಿ ಬೇಸತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಕ್ತ ನೆರವು ನೀಡುತ್ತಿಲ್ಲ. ನೆರೆಪರಿಹಾರ, ಕೋವಿಡ್ ಪರಿಹಾರ, ಲಸಿಕೆ, ಆಮ್ಲಜನಕವಿತರಣೆ ಸೇರಿದಂತೆಎಲ್ಲದರಲ್ಲೂ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ರಾಜ್ಯ ಸರ್ಕಾರವಾಗಲಿ, ಸಂಸತ್ ಸದಸ್ಯರಾಗಲಿ ಮಾತನಾಡುತ್ತಿಲ್ಲ. ಕೋವಿಡ್ ನಿಯಂತ್ರಣದಲ್ಲಿ, ನೀರಾವರಿ ಯೋಜನೆಗಳ ಟೆಂಡರ್ನಲ್ಲಿ, ಬಿಡಿಎನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಲೂಟಿಯಗುತ್ತಿದೆ ಎಂದು ಬಿಜೆಪಿ ನಾಯಕರೇ ಆರೋಪಿಸುತ್ತಿದ್ದಾರೆ ಎಂದರು.
ಯೂತ್ ಕಾಂಗ್ರೆಸ್ ಮುಖಂಡ ಸೈಯದ್ ಬುಡೇನ್, ಸೈಯದ್ ಸುಹೇಲ್ ಪಾಷಾ, ಸೈಯದ್ ರುಮಾನ, ಸುರೇಶ್, ನಾಗರಾಜು, ಖಾದರ್, ಮಸ್ತಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.