ADVERTISEMENT

ಬಾಗೇಪಲ್ಲಿ: ಕೆಂಪು ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 5:05 IST
Last Updated 22 ಫೆಬ್ರುವರಿ 2026, 5:05 IST
ಬಾಗೇಪಲ್ಲಿಯಲ್ಲಿ ಕೆಂಪು ಪುಸ್ತಕ ದಿನದ ಅಂಗವಾಗಿ ಯು.ಎಸ್ ಸಾಮ್ರಾಜ್ಯಶಾಹಿ ಭಾರತ ಜನರ‌ ಶತ್ರು ಪುಸ್ತಕವನ್ನು ಸಿಪಿಎಂ ಮುಖಂಡರು ಬಿಡುಗಡೆ ಮಾಡಿದರು
ಬಾಗೇಪಲ್ಲಿಯಲ್ಲಿ ಕೆಂಪು ಪುಸ್ತಕ ದಿನದ ಅಂಗವಾಗಿ ಯು.ಎಸ್ ಸಾಮ್ರಾಜ್ಯಶಾಹಿ ಭಾರತ ಜನರ‌ ಶತ್ರು ಪುಸ್ತಕವನ್ನು ಸಿಪಿಎಂ ಮುಖಂಡರು ಬಿಡುಗಡೆ ಮಾಡಿದರು   

ಬಾಗೇಪಲ್ಲಿ: ಪಟ್ಟಣದ ಸುಂದರಯ್ಯ ಭವನದಲ್ಲಿ ಶನಿವಾರ ಸಿಪಿಎಂ ತಾಲ್ಲೂಕು ಸಮಿತಿಯಿಂದ ಕೆಂಪು ಪುಸ್ತಕದ ಬಿಡುಗಡೆ ಕಾರ್ಯಕ್ರಮ‌ ನಡೆಯಿತು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಯುಎಸ್ ಸಾಮ್ರಾಜ್ಯಶಾಹಿ, ಭಾರತ ಜನತೆ ಶತೃ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, 1848ರಲ್ಲಿ ಕಾರ್ಲ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಏಂಗೆಲ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆ ಬಿಡುಗಡೆ ನೆನಪಿನಲ್ಲಿ ಜಗತ್ತಿನಾದ್ಯಂತ ಕೆಂಪು ಪುಸ್ತಕ ದಿನಾಚರಣೆ ನಡೆಸಲಾಗುವುದು ಎಂದರು.

ಜಗತ್ತಿನಲ್ಲಿ ಬೈಬಲ್ ನಂತರದಲ್ಲಿ ಅತೀ ಹೆಚ್ಚು ಮುದ್ರಣ ಕಂಡು ಜಗತ್ತಿನ ವಿವಿಧ ಭಾಷೆಗಳಲ್ಲಿ ಮುದ್ರಿಸಿ ದಾಖಲೆ ಮಾಡಿದ ಮೇರುಕೃತಿ ಆಗಿದೆ. ಅಮೇರಿಕಾ ಸಾಮ್ರಾಜ್ಯಶಾಹಿಯು ಸಮಾಜವಾದಿ ದೇಶಗಳ ಮೇಲೆ ಅಲ್ಲಿನ ಸಂಪತ್ತನ್ನು ಲೂಟಿ ಮಾಡಲು ನಿರಂತರವಾಗಿ ಮಿಲಿಟರಿ ದಾಳಿ ನಡೆಸಿ ಬೆದರಿಕೆ ಹಾಕುತ್ತಿದೆ.
ಭಾರತದ ಮೇಲೆ ಮಿಲಿಟರಿ ದಾಳಿಯ ಬದಲಿಗೆ ಇಲ್ಲಿನ ರೈತರ, ಕಾರ್ಮಿಕರ ಪರ ಕಾನೂನುಗಳನ್ನು ಬದಲಾಯಿಸಿ ಸರ್ಕಾರದ ನೀತಿಗಳನ್ನೇ ಅಮೇರಿಕಾ ಪರ ಮಾಡಿಕೊಂಡಿರುವುದು ಸಾಮ್ರಾಜ್ಯಶಾಹಿ ಕ್ರೂರ ಮುಖಗಳನ್ನು ಅನಾವರಣಗೊಳಿಸಿದೆ ಎಂದರು.

ADVERTISEMENT

ಕಡಿಮೆ ಬೆಲೆಗೆ ರಷ್ಯಾದಿಂದ ಪಡೆಯುತ್ತಿದ್ದ ತೈಲವನ್ನು ಪಡೆಯಬಾರದು ಎಂದು ಅಮೆರಿಕ ಬೆದರಿಕೆ ಹಾಕಿ ದುಬಾರಿ ಬೆಲೆಯ ತೈಲವನ್ನು ಪಡೆಯಬೇಕೆಂಬ ಷರತ್ತು ಜನತೆಯ ಮೇಲೆ ಹೊರೆ ಹಾಕಲು ಮುಂದಾಗಿದೆ. ಹಾಗಾಗಿ ಇದು ಭಾರತ ಜನತೆಯ ಶತ್ರು ಎಂದು ನಾವು ತಿಳಿಯಬೇಕು ಎಂದರು.

ಸಾಮ್ರಾಜ್ಯಶಾಹಿ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸದೇ ಇದ್ದರೆ ದೇಶಕ್ಕೆ ಮುಂದೆ ಅಪಾಯವಿದೆ. ಇದರ ವಿರುದ್ಧ ಆಂದೋಲನ ನಡೆಯಬೇಕು ಎಂದು ಹೇಳಿದರು.

ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ರಘುರಾಮರೆಡ್ಡಿ ಎಂ.ಎನ್ ಮಾತನಾಡಿ, ಜಗತ್ತಿನ ಬದಲಾವಣೆಗಾಗಿ ತೊಡಗಿಸಿಕೊಂಡಿರುವ ಎಡಪಂಥೀಯರು, ಚಳವಳಿಗಾರರು, ಬರಹಗಾರರು ಇಂದು ಜಗತ್ತಿನಾದ್ಯಂತ ಕೆಂಪು ಪುಸ್ತಕ ದಿನ ಆಚರಿಸುತ್ತಿದ್ದಾರೆ. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ ಮತ್ತಷ್ಟು ಬಲಪಡಿಸಲು ನಾವೆಲ್ಲರೂ ಮುಂದಾಗಬೇಕು. ಜನರ ಹಕ್ಕುಗಳನ್ನು ರಕ್ಷಿಸುವುದು ಅನಿವಾರ್ಯ ಮತ್ತು ಅಗತ್ಯವಿದೆ ಎಂದು ತಿಳಿಸಿದರು.

ಸಿಪಿಎಂ ಮುಖಂಡ ಎಚ್.ಎ.ರಾಮಲಿಂಗಪ್ಪ, ಡಿ.ಟಿ. ಮುನಿಸ್ವಾಮಿ, ಡಿ.ಸಿ.ಶ್ರೀನಿವಾಸ, ಚನ್ನರಾಯಪ್ಪ, ವಕೀಲ ರಾಜಶೇಖರ, ಅಶ್ವತ್ಥಪ್ಪ, ಜಿ.ಕೃಷ್ಣಪ್ಪ, ಕೆ.ಮುನಿಯಪ್ಪ, ಬಿ.ಎಚ್.ರಫೀಕ್, ರಾಮಾಂಜಿ, ಅಬ್ದುಲ್ ರಶೀದ್, ಎ.ಸೋಮಶೇಖರ, ನರಸಿಂಹರೆಡ್ಡಿ, ರವಣಪ್ಪ, ನಾರಾಯಣಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.