ADVERTISEMENT

‘ಆರು ತಿಂಗಳೊಳಗೆ ಸಿಪಿಎಂ ಸಂಘಟನೆ’

ಗೂಳೂರಿನಲ್ಲಿ ಸಿಪಿಎಂ ಸಮಿತಿಯಿಂದ ರಾಜಕೀಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 7:32 IST
Last Updated 11 ನವೆಂಬರ್ 2020, 7:32 IST
ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನಲ್ಲಿ ಸಿಪಿಎಂ ಸ್ಥಳೀಯ ಸಮಿತಿಯಿಂದ ಹಮ್ಮಿಕೊಂಡಿದ್ದ ರಾಜಕೀಯ ಸಮಾವೇಶದಲ್ಲಿ ಪಿಎಸ್‌ಎಸ್, ಕಾಂಗ್ರೆಸ್, ಜೆಡಿಎಸ್‌ ಕಾರ್ಯಕರ್ತರು ಸಿಪಿಎಂಗೆ ಸೇರ್ಪಡೆಯಾದರು
ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನಲ್ಲಿ ಸಿಪಿಎಂ ಸ್ಥಳೀಯ ಸಮಿತಿಯಿಂದ ಹಮ್ಮಿಕೊಂಡಿದ್ದ ರಾಜಕೀಯ ಸಮಾವೇಶದಲ್ಲಿ ಪಿಎಸ್‌ಎಸ್, ಕಾಂಗ್ರೆಸ್, ಜೆಡಿಎಸ್‌ ಕಾರ್ಯಕರ್ತರು ಸಿಪಿಎಂಗೆ ಸೇರ್ಪಡೆಯಾದರು   

ಬಾಗೇಪಲ್ಲಿ: ‘ಮುಂದಿನ ಆರು ತಿಂಗಳ ಒಳಗೆ ಸಿಪಿಎಂ ಸಂಘಟಿಸಲಾಗುವುದು. ಸಿಪಿಎಂಗೆ ಇಲ್ಲಿ ನೆಲೆಯೇ ಇಲ್ಲ ಎಂದು ಹೇಳುವ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ ಜನರು ನೀಡಲಿದ್ದಾರೆ’ ಎಂದು ಸಿಪಿಐ(ಎಂ) ಪಕ್ಷದ ಮುಖಂಡ ಡಾ.ಅನಿಲ್ ಕುಮಾರ್ ಚಾಟಿ ಬೀಸಿದರು.

ಗೂಳೂರಿನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಗೂಳೂರು ಸ್ಥಳೀಯ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗೂಳೂರು, ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯಿತಿಮಟ್ಟದ ಸಮಾವೇಶದಲ್ಲಿ ಮಾತನಾಡಿದರು.

‘ಸಿಪಿಎಂ ಒಬ್ಬ ವ್ಯಕ್ತಿಗೆ ಜಾತಿ, ಧರ್ಮಕ್ಕೆ ಸೀಮಿತವಲ್ಲ ಬದಲಿಗೆ ಶ್ರಮಜೀವಿಗಳ ಪಕ್ಷವಾಗಿದೆ. ಎಲ್ಲಿವರೆಗೂ ಜನವಿರೋಧಿ ಧೋರಣೆ, ಹಕ್ಕುಗಳ ಪಡೆಯಲು ಸಿಪಿಎಂ ಸದಾ ಹೋರಾಟ ಮಾಡುತ್ತದೆ. ಕೆಲವರು ಅನ್ಯ ಸಂಘಟನೆ ಕಟ್ಟಿದ ಮಾತ್ರಕ್ಕೆ ಸಿಪಿಎಂ ಪಕ್ಷಕ್ಕೆ ಉಳಿಗಾಲ ಇಲ್ಲ ಎನ್ನುವುದು ಸುಳ್ಳು. ಅಂತರರಾಷ್ಟ್ರೀಯ, ರಾಷ್ಟಮಟ್ಟದಲ್ಲಿ ಸಿಪಿಎಂನಲ್ಲಿ ಅನೇಕಾರು ಮಂದಿ ಬಂದು, ಹೋಗಿದ್ದಾರೆ. ಕೆಲವರು ಪಕ್ಷದ ಕಮ್ಯೂನಿಸಂ, ಮಾರ್ಕಿಸಿಸಂನ ನೀತಿ, ಸಿದ್ಧಾಂತಗಳನ್ನು ರೂಢಿಸಿ ದುಡಿದಿದ್ದಾರೆ. ಕೆಲವರು ಸ್ವಾರ್ಥ ರಾಜಕಾರಣ ಮಾಡಿ ಕೊಂಡು ಪಕ್ಷ ಬಿಟ್ಟಿದ್ದಾರೆ’ ಎಂದರು.

ADVERTISEMENT

ಸಿಪಿಎಂ ತಾಲ್ಲೂಕು ಸಮಿತಿ ಸದಸ್ಯ ಪಿ.ಮಂಜುನಾಥರೆಡ್ಡಿ ಮಾತನಾಡಿ, ‘ಸಿಪಿಎಂನಲ್ಲಿ ಕೆಲ ಆಂತರಿಕ ಗೊಂದಲಗಳಿಗೆ ಕಡಿವಾಣ ಹಾಕಬೇಕು. ಕಾರ್ಯಕರ್ತರಲ್ಲಿ ನಿರುತ್ಸಾಹ ಬೇಡ. ಹೊಸ ಹುಮ್ಮಸ್ಸಿನಿಂದ ಪಕ್ಷ ಸಂಘಟನೆ ಮಾಡುವುದರಲ್ಲಿ ಕೆಲಸ ಮಾಡಬೇಕು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು, ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಜನರು ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಸೇರಬಹುದು. ಕಾರ್ಯಕರ್ತರು ಶ್ರಮಿಸಬೇಕು’ ಎಂದು ಕರೆ ನೀಡಿದರು.

ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಮಹಮದ್ ಅಕ್ರಂ ಮಾತನಾಡಿ, ‘ಮುಂದಿನ ದಿನಗಳಲ್ಲಿ ಎಲ್ಲಾ ಪಂಚಾಯಿತಿ ಮಟ್ಟದಲ್ಲಿ ರಾಜಕೀಯ ಸಮಾವೇಶಗಳನ್ನು ಮಾಡಲಾಗುವುದು. ಸಿಪಿಎಂ ಶ್ರಮಿಕರ ಪಕ್ಷವಾಗಿದೆ. ಕೃಷಿ ಕೂಲಿ ಕಾರ್ಮಿಕರು, ನಿರ್ಗತಿಕರು, ದಲಿತರು, ಮಹಿಳೆಯರ ಸಮಸ್ಯೆಗಳ ವಿರುದ್ಧ ಸರ್ಕಾರಗಳಿಗೆ ಕಣ್ಣು ತೆರೆಸುವ ಪಕ್ಷ ಸಿಪಿಎಂ ಆಗಿದೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಿಎಸ್‌ಎಸ್ ಸಂಘಟನೆ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ತಾಲ್ಲೂಕು ಸಮಿತಿ ಕಾರ್ಯದರ್ಶಿ ಮಹಮದ್ ಅಕ್ರಂರವರು ಕೆಂಪು ಟೇಪು ಹಾಕಿ, ಕೆಂಪುಬಾವುಟ ನೀಡಿ ಸಿಪಿಎಂಗೆ ಸೇರಿಸಿಕೊಂಡರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ತಾ. ಪಂ. ಸದಸ್ಯ ಶ್ರೀರಾಮನಾಯಕ್, ಮುಖಂಡರಾದ ಅಶ್ವಥ್ಥಪ್ಪ, ಬಿ.ಸಾವಿತ್ರಮ್ಮ, ಎ.ಎನ್.ಶ್ರೀರಾಮಪ್ಪ, ಜಿ.ಮುಸ್ತಾಫ, ಎಂ.ಎನ್.ರಘುರಾಮರೆಡ್ಡಿ, ಆರ್.ಜಯಪ್ಪ, ಸಿಪಿಎಂ ಗೂಳೂರು ಸ್ಥಳೀಯ ಸಮಿತಿ ಕಾರ್ಯದರ್ಶಿ ವೆಂಕಟರಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.