ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ಬಳಿಯ ಪ್ರಾವಿಜನ್ ಸ್ಟೋರ್ ಮಾಲೀಕರೊಬ್ಬರನ್ನು ಚಾಕುವಿನಿಂದ ಕತ್ತು ಕೊಯ್ದು, ಇರಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಐಬಸಾಪುರ ಗ್ರಾಮದ ನಿರಂಜನಮೂರ್ತಿ (48) ಕೊಲೆಯಾದವರು.
ನಿತ್ಯ ಐಬಸಾಪುರದಿಂದ ಜಂಗಮಕೋಟೆ ಕ್ರಾಸ್ಗೆ ಬಂದು ಹೋಗುತ್ತಿದ್ದ ನಿರಂಜನಮೂರ್ತಿ ಅವರು ಗುರುವಾರ ರಾತ್ರಿ ಮನೆಗೆ ವಾಪಾಸಾಗಿರಲಿಲ್ಲ. ಕುಟುಂಬದವರು ಅವರನ್ನು ಸಂಪರ್ಕಿಸಲು ಕರೆ ಮಾಡಿದರೆ ಅವರ ಮೊಬೈಲ್ ಸಂಖ್ಯೆ ಸ್ವಿಚ್ಡ್ ಆಪ್ ಆಗಿತ್ತು. ಹೀಗಾಗಿ, ಅವರ ಕುಟುಂಬದವರು ಶುಕ್ರವಾರ ಬೆಳಿಗ್ಗೆ ಹುಡುಕಾಟ ನಡೆಸಿದ್ದರು.
ಈ ವೇಳೆ ನಿರಂಜನಮೂರ್ತಿ ಬೈಕ್ ಜಂಗಮಕೋಟೆ ಹೊಸಕೋಟೆ ರಸ್ತೆಯ ಚರ್ಚ್ ಬಳಿ ಪತ್ತೆಯಾಗಿತ್ತು. ಅಲ್ಲೇ ಸುತ್ತ ಹುಡುಕಾಟ ನಡೆಸಿದಾಗ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಣಕ್ಕಾಗಿ ಅಥವಾ ಹಳೇ ದ್ವೇಷದ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ಇದೆ ಎಂದು ಪೋಲಿಸರು ತಿಳಿಸಿದರು. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.