
ಶಿಡ್ಲಘಟ್ಟ: ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳಲ್ಲಷ್ಟೆ ಅಲ್ಲ ಯುವಜನರು ಮತ್ತು ಹಿರಿಯರು ಸೇರಿದಂತೆ ಎಲ್ಲ ವರ್ಗದವರಲ್ಲೂ ಪುಸ್ತಕ ಓದುವ ಅಭ್ಯಾಸ ಮತ್ತು ಹವ್ಯಾಸ ಕಡಿಮೆ ಆಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿ ಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸಾಪದಿಂದ ಹಮ್ಮಿಕೊಂಡಿದ್ದ ಅಂಬಿಕಾತನಯದತ್ತ ದ.ರಾ.ಬೇಂದ್ರೆ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ನಾಡು ಐತಿಹಾಸಿಕ, ಪೌರಾಣಿಕ, ಪ್ರಾಕೃತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಎಷ್ಟು ಉನ್ನತ ಸ್ಥಿತಿಯಲ್ಲಿ ಇದ್ದೇವೋ ಅದೇ ರೀತಿ ಸಾಹಿತ್ಯಕ್ಕೆ ಮತ್ತು ಸಾಹಿತಿಗಳಿಗೆ ನಮ್ಮಲ್ಲಿ ಕೊರತೆ ಇಲ್ಲ. ಇಡೀ ಜಗತ್ತಿನ ಸಾಹಿತ್ಯ ಕ್ಷೇತ್ರದ ಗಮನ ಸೆಳೆದ ಸಾಹಿತಿಗಳನ್ನು ನಮ್ಮ ನಾಡು ನೀಡಿದೆ ಎಂದರು.
ದ.ರಾ.ಬೇಂದ್ರೆ ಅವರು ಎಲ್ಲ ವರ್ಗದವರೂ ಓದುವ ಸಾಹಿತ್ಯವನ್ನು ರಚಿಸಿದ್ದು ಅವುಗಳನ್ನು ಎಲ್ಲರೂ ಓದಬೇಕು. ಅವರು ಸಾಹಿತ್ಯದ ಮೂಲಕ ನೀಡಿದ ಸಂದೇಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕೆಂದು ಕೋರಿದರು.
ಮುಖ್ಯ ಶಿಕ್ಷಕ ಎಂ.ದೇವರಾಜ್ ಮಾತನಾಡಿ, ದ.ರಾ.ಬೇಂದ್ರೆ ಅವರು ಜೀವನದ ಹಾದಿ, ಅವರ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು.
ವಿದ್ಯಾರ್ಥಿಗಳಿಗೆ ನಡೆಸಿದ ಭಾಷಣ, ಕವನ ವಾಚನ, ಗಾಯನ ಸ್ವರ್ಧೆಯಲ್ಲಿ ವಿಜೇತ ವಿನಯ್ ಕುಮಾರ್, ರಾಕೇಶ್, ವರ್ಷಿಣಿ, ಮೋಹಿತ್, ಪೃಥ್ವಿ, ಸಹನ, ಭಾನುಪ್ರಿಯ, ಅಶ್ವಿನಿ, ಗಾನವಿ, ಪಲ್ಲವಿ, ಕೀರ್ತನ ಇನ್ನಿತರೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಎಂ.ವೆಂಕಟಶಿವಣ್ಣ, ಸಾಹಿತ್ಯ ಪರಿಷತ್ ಪದಾಧಿಕಾರಿ ಎನ್.ಸುಂದರ್, ಟಿ.ಟಿ.ನರಸಿಂಹಪ್ಪ, ರಾಮಾಂಜನೇಯ, ಡಿ.ಎಸ್.ಸತ್ಯನಾರಾಯಣ ರಾವ್, ಕವಿ ಜಿ.ಎನ್.ಶಾಮ ಸುಂದರ್, ಶಿಕ್ಷಕ ಪ್ರಭಾಕರ್, ಎಂ. ಮಂಜುನಾಥ್, ಕೃಪ, ನಳಿನಾಕ್ಷಿ, ಶ್ಯಾಮಲ, ಸುಪ್ರಿಯ, ಶ್ವೇತ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.