ಶಿಡ್ಲಘಟ್ಟ: ‘ಸರ್ಕಾರ ನಿಗದಿಪಡಿಸಿರುವ ಮಾನದಂಡವನ್ನು ಉಲ್ಲಂಘಿಸಿ ನಿಯಮಬಾಹಿರವಾಗಿ ಪಡೆದುಕೊಂಡಿರುವ ಬಿಪಿಎಲ್ ಹಾಗೂ ಎಎವೈ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರು ಜೂ.30ರೊಳಗೆ ಆಹಾರ ಇಲಾಖೆಗೆ ಹಿಂದಿರುಗಿಸಬೇಕು’ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದ್ದಾರೆ.
‘ತಾಲ್ಲೂಕಿನಾದ್ಯಂತ ನಿಯಮ ಬಾಹಿರವಾಗಿ ಬಿಪಿಎಲ್ ಹಾಗೂ ಎಎವೈ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರನ್ನು ಗುರುತಿಸಿ ರದ್ದುಪಡಿಸುವ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದೆ. ಅನಧಿಕೃತವಾಗಿ ಪಡಿತರ ಚೀಟಿ ಪಡೆದುಕೊಂಡಿರುವವರು ತಾವೇ ಸ್ವಯಂಪ್ರೇರಣೆಯಿಂದ ತಮ್ಮ ಪಡಿತರ ಚೀಟಿಗಳನ್ನು ಯಾವುದೇ ದಂಡವಿಲ್ಲದೇ ಹಿಂದಿರುಗಿಸಲು ಜೂನ್ 30 ರವರೆಗೂ ಕಾಲಾವಕಾಶ ಕಲ್ಪಿಸಲಾಗಿದೆ’ ಎಂದಿದ್ದಾರೆ.
ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳು ಸೇರಿದಂತೆ ಸಾರಿಗೆ, ಶಿಕ್ಷಣ, ವಿದ್ಯುತ್, ರೈಲ್ವೆ, ಪೊಲೀಸ್ ಹಾಗೂ ಅಂಚೆ ಇಲಾಖೆ ಸೇರಿದಂತೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಹೆಸರನ್ನು ಹೊರತುಪಡಿಸಿ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿ ಬಿಪಿಎಲ್ ಹಾಗೂ ಎಎವೈ ಪಡಿತರ ಚೀಟಿ ಪಡೆದಿರುತ್ತಾರೆ. ಇಂತಹವರು ಕೂಡಲೇ ತಮ್ಮ ಪಡಿತರ ಚೀಟಿಗಳನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಅಂತಹ ಕುಟುಂಬಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.