ಚಿಕ್ಕಬಳ್ಳಾಪುರ: ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಜೀವ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್ಪಿಐ) ಕಾರ್ಯಕರ್ತರು ಮಂಗಳವಾರ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಆರ್ಪಿಐ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ, ‘ಅಂಬೇಡ್ಕರ್ ಅವರ ಜೀವನಾಧಾರಿತ ಕಥೆಯುಳ್ಳ ಈ ಧಾರಾವಾಹಿ ಸತ್ಯಾಂಶ ಆಧಾರಿತವಾದದ್ದು. ಅದನ್ನು ಸಹಿಸದ ಕೆಲವರು ವಾಹಿನಿ ಮುಖ್ಯಸ್ಥರಾಘವೇಂದ್ರ ಅವರಿಗೆ ಬೆದರಿಕೆ ಹಾಕಿದ್ದಾರೆ. ಅವರನ್ನು ಪತ್ತೆ ಹಚ್ಚಿ ಈ ಕೂಡಲೆ ಬಂಧಿಸಬೇಕು’ ಎಂದು ಆಗ್ರಹಿಸಿದರು.
‘ಅಂಬೇಡ್ಕರ್ ಅವರ ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಹಾಕಿದ್ದು ನಾಡಿನ ದಲಿತರು, ರೈತರು ಸೇರಿದಂತೆ ನಾಡಿನ ಕೋಟ್ಯಂತರ ಜನರಿಗೆ ಮಾಡಿದ ಅವಮಾನ. ಇದು ಪರಿಶಿಷ್ಟ ಸಮುದಾಯದ ಮೇಲಿನ ದೌರ್ಜನ್ಯವಾಗಿದೆ. ಆದ್ದರಿಂದ ರಾಘವೇಂದ್ರ ಅವರಿಗೆ ಬೆದರಿಕೆ ಹಾಕಿದವರು ಮತ್ತು ಧಾರಾವಾಹಿ ಸ್ಥಗಿತಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವವ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು‘ ಎಂದು ಹೇಳಿದರು.
‘ಇದು ಕಾನೂನು ಸುವ್ಯವಸ್ಥೆ ಹದಗೆಡಿಸುವ ಷಡ್ಯಂತ್ರದ ಭಾಗದಂತೆ ತೋರುತ್ತದೆ. ತಡಮಾಡದೆ ಆರೋಪಿಗಳನ್ನು ಬಂಧಿಸಬೇಕು. ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಪಕ್ಷದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಆರ್ಪಿಐ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎಚ್.ನರಸಿಂಹಪ್ಪ, ಉಪಾಧ್ಯಕ್ಷ ಮುನಿಶಾಮಪ್ಪ, ಈಶ್ವರಪ್ಪ, ಕಾರ್ಯದರ್ಶಿ ವೆಂಕಟೇಶಪ್ಪ, ಪದಾಧಿಕಾರಿ ಪ್ರಕಾಶ್, ಮುನಿರಾಜು, ವೇಣು, ಹರಿಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.