ಶಿಡ್ಲಘಟ್ಟ: ತಾಲ್ಲೂಕಿನ ಸ್ಕೌಟ್ ಮತ್ತು ಗೈಡ್ಸ್ ಘಟಕದ ಮಕ್ಕಳು ಹಾಗೂ ಶಿಕ್ಷಕರು ವಿವಿಧ ಚಟುವಟಿಕೆ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಜನಜಾಗೃತಿ ಮೂಡಿಸುತ್ತಿದ್ದಾರೆ.
ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಉಂಟಾಗಿ ಕೊರೊನಾ ಸೋಂಕು ಉಲ್ಬಣಿಸುವ ಸಾಧ್ಯತೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಟಾಕಿ ನಿಷೇಧಿಸಿ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ, ಸರ್ಕಾರದ ಆದೇಶಕ್ಕೂ ಮುನ್ನವೇ ಸ್ಕೌಟ್ ಮತ್ತು ಗೈಡ್ಸ್ ಪರಿಸರ ಸ್ನೇಹಿ ಆಚರಿಸುವ ನಿಟ್ಟಿನಲ್ಲಿ ಹಸಿರು ದೀಪಾವಳಿ ಸಪ್ತಾಹವನ್ನು ಹಮ್ಮಿಕೊಂಡಿದೆ.
‘ಹಸಿರು ದೀಪಾವಳಿ ಆಚರಣೆಯಡಿ ಮಕ್ಕಳಿಗೆ ಆರು ಪ್ರಮುಖ ಚಟುವಟಿಕೆಗಳನ್ನು ನೀಡಲಾಗಿದೆ. ಜಾಗೃತಿ ಮೂಡಿಸುವುದು, ಕೌಶಲ ಪ್ರತಿಭೆ ಹೊರಹೊಮ್ಮಿಸುವುದು, ಪ್ರೀತಿ, ಶಾಂತಿ ಸಾರುವುದು, ಗ್ರೀಟಿಂಗ್ಸ್ ಹಂಚುವುದು, ಇತರರ ಬಗ್ಗೆ ಕಾಳಜಿ ವ್ಯಕ್ತಪಡಿಸುವುದು ಪ್ರಮುಖ ಆದ್ಯತೆಗಳಾಗಿವೆ’ ಎಂದು ತಾಲ್ಲೂಕಿನ ಸ್ಕೌಟ್ ಮತ್ತು ಗೈಡ್ಸ್ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.
ಸಗಣಿ, ಮಣ್ಣು, ಅಕ್ಕಿಹಿಟ್ಟು ಹಾಗೂ ಅರಿಸಿನ ಬಳಸಿ ಹಣತೆ ತಯಾರಿಕೆ, ವಿದ್ಯುತ್ ದೀಪ ಬದಲು ಪೇಪರ್ನಿಂದ ಆಕಾಶಬುಟ್ಟಿ ತಯಾರಿಸಿ ಬಳಸುವುದು ಹಾಗೂ ಅಕ್ಕಪಕ್ಕದವರಿಗೂ ತಯಾರಿಸಿ ನೀಡುವುದಕ್ಕೆ ಮತ್ತು ಸಾರ್ವಜನಿಕರು ಕೂಡ ಹಣತೆ, ಆಕಾಶಬುಟ್ಟಿ ತಯಾರಿಸುವಂತೆ ಪ್ರೇರೇಪಿಸಲಾಗುತ್ತಿದೆ ಎಂದು ಹೇಳಿದರು.
ದೀಪಾವಳಿ ಶುಭಾಶಯ ಕೋರಲು ಹಳೆಯ ಲಗ್ನಪತ್ರಿಕೆ ಇಲ್ಲವೇ ಡ್ರಾಯಿಂಗ್ ಶೀಟ್ನಿಂದ ಗ್ರೀಟಿಂಗ್ ಕಾರ್ಡ್ಸ್ ರಚಿಸಿ ಬಂಧುಗಳು ಹಾಗೂ ಸ್ನೇಹಿತರಿಗೆ ನೀಡುವುದು, ಪಟಾಕಿ ಬೇಡವೆಂಬ ಘೋಷವಾಕ್ಯವನ್ನು ಪ್ರಚುರಪಡಿಸಿದ್ದೇವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.