ADVERTISEMENT

ಶುದ್ಧೀಕರಣ ಯಂತ್ರಗಳಿಗೆ ಬೇಡಿಕೆ

ರಾಗಿ ಸ್ವಚ್ಛಗೊಳಿಸುವ ಯಂತ್ರಗಳಿಗೆ ರೈತರಿಂದ ಮುಂಗಡ ಬುಕ್ಕಿಂಗ್

ಡಿ.ಜಿ.ಮಲ್ಲಿಕಾರ್ಜುನ
Published 5 ಜನವರಿ 2021, 8:05 IST
Last Updated 5 ಜನವರಿ 2021, 8:05 IST
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೈತರ ಹೊಲದಲ್ಲಿ ರಾಗಿ ಶುದ್ಧೀಕರಣ ಯಂತ್ರದಿಂದ ರಾಗಿ ಜೊತೆ ಬೆರೆತ ಕಸ ಕಡ್ಡಿ, ಕಲ್ಲು ಮಣ್ಣನ್ನು ಬೇರ್ಪಡಿಸುತ್ತಿರುವುದು
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೈತರ ಹೊಲದಲ್ಲಿ ರಾಗಿ ಶುದ್ಧೀಕರಣ ಯಂತ್ರದಿಂದ ರಾಗಿ ಜೊತೆ ಬೆರೆತ ಕಸ ಕಡ್ಡಿ, ಕಲ್ಲು ಮಣ್ಣನ್ನು ಬೇರ್ಪಡಿಸುತ್ತಿರುವುದು   

ಶಿಡ್ಲಘಟ್ಟ: ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ ಬಹಳಷ್ಟಿದೆ. ಸಕಾಲದಲ್ಲಿ ಕೊಯ್ಲು, ಒಕ್ಕಣೆಮಾಡಲು ಕಷ್ಟವಾಗುವಂಥ ಪರಿಸ್ಥಿತಿ ಇದೆ. ಈ ಕಾರಣದಿಂದ ರೈತರು ತಾಂತ್ರಿಕತೆಯ, ಯಂತ್ರಗಳ ಮೊರೆಹೋಗುತ್ತಿದ್ದಾರೆ. ಈಗೀಗ ತಾಲ್ಲೂಕಿಗೆ ಕೊಯ್ಲು ಮಾಡುವ ಯಂತ್ರಗಳು ಹಾಗೂ ಒಕ್ಕಣೆಯ ನಂತರ ಧಾನ್ಯ ಶುದ್ಧೀಕರಣ ಯಂತ್ರಗಳೂ ಆಗಮಿಸಿವೆ.

ತಾಲ್ಲೂಕಿನಲ್ಲಿ ರಾಗಿ ಶುದ್ಧೀಕರಣ ಯಂತ್ರಗಳಿಗೆ ಬೇಡಿಕೆ ಹೆಚ್ಚಿದ್ದು, ರೈತರು ಯಂತ್ರಗಳು ಕೆಲಸ ಮಾಡುತ್ತಿರುವಲ್ಲಿಗೆ ಬಂದು ಮುಂಗಡವಾಗಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಒಬ್ಬೊಬ್ಬ ರೈತರೂ ಐದಾರು ದಿನಗಳು ಕಾಯುವ ರೀತಿಯಲ್ಲಿ ಈ ಯಂತ್ರಗಳಿಗೆ ಬೇಡಿಕೆ ಕುದುರಿದೆ.

ಕೃಷಿ ಯಂತ್ರೋಪಕರಣಗಳ ವಿನ್ಯಾಸ ಮಾಡುವ ತಜ್ಞರು ರೈತರ ಅವಶ್ಯಕತೆಗಳನ್ನು ಮನಗಂಡು ಅವರ ಅನುಕೂಲವಾಗುವ ರೀತಿಯಲ್ಲಿ ಸಾಕಷ್ಟು ಕೃಷಿ ಯಂತ್ರಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವುಗಳಲ್ಲಿ ರಾಗಿ ಶುದ್ಧೀಕರಣ ಯಂತ್ರವೂ ಸೇರಿದೆ.

ADVERTISEMENT

ಸಾಮಾನ್ಯವಾಗಿ ಒಕ್ಕಣೆ ಮಾಡಿದ ನಂತರ ಧಾನ್ಯಗಳನ್ನು ಶುದ್ಧೀಕರಿಸಲು ತೂರಲಾಗುತ್ತದೆ. ಇದು ಒಕ್ಕಣೆ ಮಾಡಿದ ತಕ್ಷಣ ಆಗಬೇಕಾದ ಕೆಲಸ. ಸಕಾಲದಲ್ಲಿ ಇದು ಆಗದಿದ್ದರೆ ರೈತರು ಉಳಿದ ಕೃಷಿ ಕೆಲಸ ಕಾರ್ಯಗಳತ್ತ ಗಮನ ನೀಡಲು ಆಗುವುದಿಲ್ಲ. ಹಾಗಾಗಿ ಇದೀಗ ಎಲ್ಲರೂ ಈ ಕೃಷಿ ಯಂತ್ರಗಳ ಮೊರೆಹೋಗುತ್ತಿದ್ದಾರೆ.

‘ನಾವು ಅಣ್ಣತಮ್ಮಂದಿರು ಈ ರೀತಿಯ ನಾಲ್ಕು ಯಂತ್ರ ಇಟ್ಟುಕೊಂಡಿದ್ದೇವೆ. 2015ರಿಂದ ಇದನ್ನೇ ನಾವು ಜೀವನೋಪಾಯ ಮಾಡಿಕೊಂಡಿದ್ದೇವೆ. ಕಟಾವಾಗಿ ಒಣಗಿಸಿದ ರಾಗಿಯನ್ನು ಯಂತ್ರದಲ್ಲಿ ತೆನೆ ಸಮೇತ ಹಾಕಿ ಶುದ್ಧೀಕರಿಸುತ್ತೇವೆ. ಈ ಯಂತ್ರದಲ್ಲಿ ಕಸ ಕಡ್ಡಿ, ಕಲ್ಲು, ಮಣ್ಣನ್ನು ಸುಲಭವಾಗಿ ಬೇರ್ಪಡಿಸಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ಗುಣಮಟ್ಟದ ರಾಗಿ ರೈತರಿಗೆ ಲಭಿಸುತ್ತದೆ. ತೆನೆಯಾದರೆ ಒಂದು ಪಲ್ಲಕ್ಕೆ ₹100, ಕಸಕಡ್ಡಿ ಇರುವ ರಾಗಿಯಾದರೆ ಒಂದು ಪಲ್ಲಕ್ಕೆ ₹80 ಪಡೆಯುತ್ತೇವೆ’ ಎಂದು ಯಂತ್ರದ ಮಾಲೀಕರಾದ ಅಂಕತಟ್ಟಿ ಮುನಿರಾಜು ಮತ್ತು ಶ್ರೀನಿವಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.