ADVERTISEMENT

ಶಿಡ್ಲಘಟ್ಟ: ಪಠ್ಯೇತರ ಚಟುವಟಿಕೆಗಳಿಗೆ ಎತ್ತಿದ ಕೈ ದೇವರಮಳ್ಳೂರು ಶಾಲೆ

ದೇವರಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಡಿ.ಜಿ.ಮಲ್ಲಿಕಾರ್ಜುನ
Published 23 ಡಿಸೆಂಬರ್ 2023, 6:30 IST
Last Updated 23 ಡಿಸೆಂಬರ್ 2023, 6:30 IST
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು   

ಶಿಡ್ಲಘಟ್ಟ: ತಾಲ್ಲೂಕಿನ ದೇವರಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಠ್ಯೇತರ ಚಟುವಟಿಕೆಗಳಿಗೆ ಹೆಸರಾಗಿದೆ. ಪ್ರತಿ ವರ್ಷ ನಡೆಯುವ ಪ್ರತಿಭಾ ಕಾರಂಜಿಯಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದಲ್ಲಿ ವಿಜೇತರಾಗಿ ಪ್ರಶಸ್ತಿಗಳನ್ನು ಗೆಲ್ಲುತ್ತಾರೆ.

ಅದೇ ರೀತಿ 2023ರ ಗಣಿತ ಕಲಿಕಾ ಆಂದೋಲನದಲ್ಲಿ ಗಣಿತ ಸ್ಪರ್ಧೆಯಲ್ಲಿ ಈ ಶಾಲೆಯ ಮಕ್ಕಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದು ಶಾಲೆಗೆ ಹೆಸರು ತಂದಿದ್ದಾರೆ.

ಸ್ಮಾರ್ಟ್ ಕ್ಲಾಸ್ ಹೊಂದಿರುವ ಈ ಶಾಲೆಯಲ್ಲಿ ಮಕ್ಕಳು ಚಿತ್ರ ಹಾಗೂ ವಿಡಿಯೊ ರೂಪದಲ್ಲಿ ಪಠ್ಯ ಕಲಿಯುತ್ತಾರೆ. ಈ ಶಾಲೆಯ ಮುಖ್ಯ ಶಿಕ್ಷಕ ಬಿ.ವಿ.ಮಂಜುನಾಥ್ ಅವರಿಗೆ 2023ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ADVERTISEMENT

ಶತಮಾನದ ಹೊಸ್ತಿಲಿನಲ್ಲಿರುವ ಶಾಲೆಯಲ್ಲಿ ಪ್ರಸ್ತುತ 1 ರಿಂದ 7ನೇ ತರಗತಿಯವರೆಗೆ 43 ವಿದ್ಯಾರ್ಥಿಗಳು ಓದುತ್ತಿದ್ದಾರೆ. 4 ಮಂದಿ ಶಿಕ್ಷಕರಿದ್ದಾರೆ. ಶಾಲೆಯ ಆವರಣದಲ್ಲಿ ಮರಗಳಿದ್ದು, ತಂಪಾದ ವಾತಾವರಣವಿದೆ. ಇದು ಮಕ್ಕಳ ಚಟುವಟಿಕೆಗಳಿಗೆ ಪೂರಕವಾಗಿದೆ.

ನಮ್ಮ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳು ನಡೆಯಲು ಶಿಕ್ಷಕಿಯರಾದ ಶಾಂತಕುಮಾರಿ, ಶಶಿ, ಲಾವಣ್ಯ ಅವರ ಸಹಕಾರ ಮತ್ತು ಆಸಕ್ತಿ ಕಾರಣ. ಅವರು ಶಾಲೆಗೆ ಶಿಕ್ಷಕರ ಸಹಕಾರದಿಂದ ಸ್ಮಾರ್ಟ್‌ ಕ್ಲಾಸ್‌ ರೂಮ್‌ ವ್ಯವಸ್ಥೆ ಮಾಡಿಸಲಾಗಿದೆ. ಜತೆಗೆ ಎಸ್‌ಡಿಎಂಸಿ ಸಹಕಾರದಿಂದ ಶಾಲೆಗೆ ಕಂಪ್ಯೂಟರ್ ಲಭ್ಯವಾಗಿದೆ. ಒಟ್ಟಾರೆ ಶಾಲೆಯ ಪ್ರಗತಿಗೆ ಎಲ್ಲರ ಸಹಕಾರ ಸಿಗುತ್ತಿದೆ ಎಂಬುದು ಮುಖ್ಯಶಿಕ್ಷಕ ಬಿ.ವಿ.ಮಂಜುನಾಥ್ ಅವರ ಮಾತಾಗಿದೆ.

ಶಾಲೆಯ ಅಗತ್ಯತೆಗಳು: ಶಾಲೆಗೆ ಆಟದ ಮೈದಾನ ಅಗತ್ಯವಿದೆ. ಮೈದಾನ ನಿರ್ಮಾಣವಾದರೆ ಮಕ್ಕಳ ಕ್ರೀಡಾಸಕ್ತಿಗೆ ಹಾಗೂ ಹೆಚ್ಚಿನ ಚಟುವಟಿಕೆಗಳಿಗೆ ಸಹಾಯಕವಾಗುತ್ತದೆ. ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂಬುದ ಶಿಕ್ಷಕರ ಅಭಿಪ್ರಾಯವಾಗಿದೆ.

ಗುಣಮಟ್ಟದ ಶಿಕ್ಷಣದ ಜತೆಯಲ್ಲಿ ಮಕ್ಕಳು ವಿವಿಧ ಆಸಕ್ತಿ ಬೆಳೆಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳು ಉತ್ತಮ ಕಲಿಕೆಯೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕೆಂಬುದು ಎಂಬುದು ನಮ್ಮೆಲ್ಲಾ ಶಿಕ್ಷಕರ ಉದ್ದೇಶ

-ಬಿ.ವಿ.ಮಂಜುನಾಥ್ ಮುಖ್ಯಶಿಕ್ಷಕ

ನಮ್ಮೂರ ಶಾಲೆ ನಮ್ಮ ಹೆಮ್ಮೆ. ಈ ಶಾಲೆಯ ಅಭಿವೃದ್ಧಿಗೆ ಶಿಕ್ಷಕರೇ ಕಾರಣ. ಮಕ್ಕಳಿಗೆ ಪಾಠದ ಜತೆ ಪಠ್ಯೇತರ ವಿಚಾರಗಳನ್ನು ಕಲಿಸುತ್ತಾರೆ. ಅವರ ಆಸಕ್ತಿ ಗುರುತಿಸಿ ಸಂಗೀತ ಕಲೆ ಸಾಹಿತ್ಯ ಕ್ರೀಡೆ ನೃತ್ಯ ಮುಂತಾದ ಸಂಗತಿಗಳಿಗೆ ಪ್ರೋತ್ಸಾಹಿಸುತ್ತಾರೆ

-ಚನ್ನಕೃಷ್ಣ ಎಸ್‌ಡಿಎಂಸಿ ಸದಸ್ಯ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.