ಗೌರಿಬಿದನೂರು: ನಗರದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಬೆಂಗಳೂರಿನ ಗೋಪಿನಾಥ್ ಮತ್ತು ಸ್ನೇಹಿತರ ತಂಡ ಗುಣಮಟ್ಟದ ಕರ್ಜೂರ ಸೇರಿದಂತೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡಿದೆ.
ನಗರಸಭೆ ಸದಸ್ಯ ವಿ. ಅಮರನಾಥ್ ಮಾತನಾಡಿ, ಗ್ರಾಮೀಣ ಭಾಗದಿಂದ ಬಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಒಳರೋಗಿಗಳಿಗೆ ಪೌಷ್ಟಿಕ ಆಹಾರ ಹಾಗೂ ರೋಗ ನಿರೋಧಕ ಶಕ್ತಿಯ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ತಿಳಿದುಬಂದಿದೆ. ಹಾಗಾಗಿ, ಬೆಂಗಳೂರಿನ ಗೋಪಿನಾಥ್ ಮತ್ತು ಅವರ ತಂಡದ ಸಹಕಾರದಿಂದ ರೋಗಿಗಳಿಗೆ ಖರ್ಜೂರ ಮತ್ತು ಇನ್ನಿತರ ಆಹಾರ ಪದಾರ್ಥಗಳನ್ನು ವೈದ್ಯರಿಗೆ ನೀಡಿದ್ದೇವೆ. ಅವರ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಹಂತ ಹಂತವಾಗಿ ಒಳರೋಗಿಗಳಿಗೆ ನೀಡಬಹುದಾಗಿದೆ ಎಂದು ಹೇಳಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಕೊರತೆಯಿದೆ. ದಾನಿಗಳು ಅವರ ಸಂಕಷ್ಟ ಅರಿತು ಸ್ಪಂದಿಸುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ದಾನಿಗಳು ನೀಡಿದ ಪೌಷ್ಟಿಕಾಹಾರವನ್ನು ಒಳರೋಗಿಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ವೈದ್ಯರಾದ ಡಾ.ಮುರಳೀಧರ್, ಡಾ.ಶೇಷಗಿರಿರಾವ್, ಡಾ.ಶ್ರೀಕಾಂತ್, ಮುಖಂಡರಾದ ಎನ್.ಆರ್. ಅಮಿತ್, ರಾಜೇಂದ್ರಪ್ರಸಾದ್, ಬದ್ರಿನಾಥ್, ಪ್ರಭಾಕರ್, ಕೆ.ವಿ .ರಾಘವೇಂದ್ರ, ಆರ್.ಸಿ. ಅನಿಲ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.