ADVERTISEMENT

ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳಲು ಸಲಹೆ

ಗೌರಿಬಿದನೂರು: ಯುವ ಕ್ರೀಡಾಪಟುಗಳಿಗೆ ಸಹಾಯಧನದ ಚೆಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 7:22 IST
Last Updated 9 ನವೆಂಬರ್ 2020, 7:22 IST
ಗೌರಿಬಿದನೂರಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಕೆಂಪರಾಜು ಕಬಡ್ಡಿ ಹಾಗೂ ಕ್ರಿಕೆಟ್ ಆಟಗಾರರಿಗೆ ಸಹಾಯಧನದ ಚೆಕ್ ವಿತರಿಸಿದರು
ಗೌರಿಬಿದನೂರಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಕೆಂಪರಾಜು ಕಬಡ್ಡಿ ಹಾಗೂ ಕ್ರಿಕೆಟ್ ಆಟಗಾರರಿಗೆ ಸಹಾಯಧನದ ಚೆಕ್ ವಿತರಿಸಿದರು   

ಗೌರಿಬಿದನೂರು: ‘ಗ್ರಾಮೀಣ ಯುವಕರು ದೇಶದ ಆಸ್ತಿಯಾಗಿದ್ದು, ಅವರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸಿದರೆ ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಕೆಂಪರಾಜು ಹೇಳಿದರು.

ನಗರ ಹೊರವಲಯದಲ್ಲಿ ಯುವ ಕ್ರೀಡಾಪಟುಗಳಿಗೆ ಆಯೋಜಿಸಿದ್ದ ಸಹಾಯಧನದ ಚೆಕ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿರುತ್ತದೆ. ಸ್ಥಳೀಯವಾಗಿ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಯುವಕರಲ್ಲಿರುವ ಕ್ರೀಡಾ ಪ್ರತಿಭೆಗೆ ಉತ್ತೇಜನ ನೀಡಬೇಕಿದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಯುವಕರಲ್ಲಿ ಸ್ಫೂರ್ತಿದಾಯಕ ನಾಯಕತ್ವದ ಗುಣ ಪುಟಿದೇಳಬೇಕಾಗಿದೆ. ಇದರಿಂದ ಭವಿಷ್ಯದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟು ಗಳಾಗಿ ಬೆಳೆಯಬಹುದು ಎಂದರು.

ADVERTISEMENT

ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಯುವಕರು ಮುಂದಾಳತ್ವವಹಿಸಬೇಕು. ಸ್ಥಳೀಯಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ. ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ‌. ಯುವಕರು ಯಾವುದೇ ರಾಜಕೀಯ ಪ್ರೇರಿತ ಷಡ್ಯಂತ್ರಗಳಿಗೆ ಕಿವಿಗೊಡಬಾರದು. ಧೈರ್ಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಶಿಕ್ಷಕ ವೈ.ಕೆ‌. ಪ್ರಕಾಶ್ ಮಾತನಾಡಿ, ತಾಲ್ಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಹೊನಲು ಬೆಳಕಿನ ಕಬಡ್ಡಿ ಮತ್ತು ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸಿದ ಕೆಂಪರಾಜು ಅವರ ಕಾರ್ಯ ಶ್ಲಾಘನೀಯವಾದುದು. ಎಲೆಮರೆ ಕಾಯಿಯಂತಿದ್ದ ಕ್ರೀಡಾಪಟು ಗಳನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.

ಮುದುಗೆರೆ ರಾಜಶೇಖರ್, ನರಸಿಂಹಯ್ಯ, ಗಂಗಾಧರಪ್ಪ, ಸುನಿಲ್, ಮಲ್ಲಿಕಾರ್ಜುನ, ಲಕ್ಷ್ಮಿಕಾಂತ್, ನಂಜುಂಡಪ್ಪ, ಶ್ರೀಕಾಂತ್, ಗೌಸ್‌ಪೀರ್, ಸತ್ಯನಾರಾಯಣ, ಜಗದೀಶ್, ಶಬ್ಬೀರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.