ಚಿಕ್ಕಬಳ್ಳಾಪುರ: ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕವನ್ನು ಜಿಲ್ಲಾಧಿಕಾರಿ ಆರ್. ಲತಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಶನಿವಾರ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಲತಾ ಅವರು, ‘ಪ್ರಜಾವಾಣಿ’ ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಯಾವುದೇ ವಿಚಾರಗಳಲ್ಲಿ ರಾಜಿಯಾಗದೆ ವಸ್ತುನಿಷ್ಠ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮಕ್ಕೆ ಹೆಸರಾಗಿದೆ. ಕನ್ನಡ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ನನಗೆ ಪ್ರಜಾವಾಣಿಯ ಓದು ಅಚ್ಚುಮೆಚ್ಚು’ ಎಂದು ಹೇಳಿದರು.
ಪ್ರತಿವರ್ಷ ದೀಪಾವಳಿ ಮತ್ತು ಯುಗಾದಿ ವಿಶೇಷಾಂಕಗಳನ್ನು ಹೊರತರುತ್ತಿರುವುದು ಉತ್ತಮ ಬೆಳವಣಿಗೆ. ಸಾಹಿತ್ಯದ ಅಭಿರುಚಿಯನ್ನು ಎಲ್ಲರಲ್ಲಿಯೂ ಬೆಳೆಸಲು ವಿಶೇಷಾಂಕಗಳು ಪೂರಕವಾಗಿವೆ. ದಶಕಗಳಿಂದಲೂ ಬರುತ್ತಿರುವ ಈ ವಿಶೇಷಾಂಕಗಳು ಸಂಗ್ರಹಯೋಗ್ಯವಾಗಿವೆ ಎಂದು ಹೇಳಿದರು.
ಪತ್ರಿಕೆಗಳು ಜನರಲ್ಲಿ ಅರಿವನ್ನು ವಿಸ್ತರಿಸುವ ಕೆಲಸವನ್ನು ಮಾಡುತ್ತಿವೆ. ಜನರಿಗೆ ಶಿಕ್ಷಣ ನೀಡುವ ದಿಕ್ಕಿನಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಕನ್ನಡ ಪತ್ರಿಕೋದ್ಯಮದಲ್ಲಿ ಈ ಹಿಂದಿನಿಂದಲೂ ಪ್ರಜಾವಾಣಿಗೆ ತನ್ನದೇ ಆದ ಉತ್ಕೃಷ್ಟವಾದ ಬ್ರ್ಯಾಂಡ್ ಇದೆ. ಸಾಮಾಜಿಕ ಹೊಣೆಗಾರಿಕೆಯನ್ನು ಬದ್ಧತೆಯಿಂದ ನಿರ್ವಹಿಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಇಂದಿನ ನವ ಮಾಧ್ಯಮಗಳ ಪ್ರಭಾವದ ನಡುವೆಯೂ ಪತ್ರಿಕೆಗಳು ಸಶಕ್ತವಾಗಿವೆ. ಇದು ಉತ್ತಮ ಬೆಳವಣಿಗೆ. ಜನರಿಗೆ ಎಲ್ಲ ಕ್ಷೇತ್ರಗಳ ಮಾಹಿತಿ, ವೈವಿಧ್ಯಮಯ ವಿಷಯಗಳನ್ನು ತಲುಪಿಸುತ್ತಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.