ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಮಂಗಳವಾರ ರಾತ್ರಿ 7.35ರಲ್ಲಿ ಚಿಕ್ಕಬಳ್ಳಾಪುರ ಉತ್ತರದಲ್ಲಿ 2.8ರಷ್ಟು ತೀವ್ರತೆಯ ಭೂಕಂಪವಾಗಿದೆ. ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರದ ವೆಬ್ಸೈಟ್ನಲ್ಲಿ ದಾಖಲಾಗಿದೆ. ಕಂಪನವು ಭೂಮಿಯ 10 ಕಿ.ಮೀ ಆಳದಲ್ಲಿ ಘಟಿಸಿದೆ.
ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತಿದ್ದು ಜನರನ್ನು ಆತಂಕಕ್ಕೆ ದೂಡಿದೆ. ಮೇ 23ರಂದು ಚಿಂತಾಮಣಿ ತಾಲ್ಲೂಕು ಕೇಂದ್ರದಿಂದ 13 ಕಿ.ಮೀ ದೂರದಲ್ಲಿ ಎರಡು ಬಾರಿ ಭೂಕಂಪ ಆಗಿತ್ತು. 2.6 ಮತ್ತು 2.4ರಷ್ಟು ತೀವ್ರತೆ ದಾಖಲಾಗಿತ್ತು. ಆ ಕಂಪನ ಸಂಭವಿಸಿದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಮತ್ತೆ ಭೂಕಂಪ ದಾಖಲಾಗಿದೆ.
ಇತ್ತೀಚೆಗೆ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿ ವ್ಯಾಪ್ತಿಯ ದಿಬ್ಬೂರಹಳ್ಳಿಗಳಲ್ಲಿಯೂ ಭೂಮಿ ನಡುಗಿದ ಅನುಭವವಾಗಿತ್ತು. ಜನರು ಭಯಗೊಂಡು ಮನೆಗಳಿಗೆ ಹೊರಗೆ ಓಡಿ ಬಂದಿದ್ದರು. ಬಾಗೇಪಲ್ಲಿ ತಾಲ್ಲೂಕಿನಲ್ಲಿಯೂ ಇಂತಹ ಅನುಭವ ಜನರಿಗೆ ಆಗಿತ್ತು. ಜಿಲ್ಲೆಯ ಕೆಲವು ಕಡೆಗಳಲ್ಲಿ ಭೂಮಿ ನಡುಗಿದ ಮತ್ತು ಭೂಮಿಯಲ್ಲಿ ಭಾರಿ ಸದ್ದು ಕೇಳಿ ಬರುವ ಅನುಭವಗಳು ಜನರಿಗೆ ಆಗುತ್ತಿವೆ.
ಈ ಸಂದರ್ಭದಲ್ಲಿ ಹಳ್ಳಿಗಳಿಗೆ ಭೇಟಿ ನೀಡುವ ಭೂವಿಜ್ಞಾನಿಗಳು ಭೂಮಿಯ ಆಳಕ್ಕೆ ನೀರು ಇಳಿಯುವ ಸಂದರ್ಭದಲ್ಲಿ ಇಂತಹ ಸದ್ದುಗಳು ಕೇಳಿ ಬರುತ್ತವೆ ಎಂದು ಹೇಳುತ್ತಿದ್ದಾರೆ. ಆದರೆ ಪದೇ ಪದೇ ಜಿಲ್ಲೆಯಲ್ಲಿ ಭೂಕಂಪ ದಾಖಲಾಗುತ್ತಿರುವುದು ಜನರನ್ನು ಸಹ ಆತಂಕಕ್ಕೆ ದೂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.