ADVERTISEMENT

ಮಗುವಿನ ಸುಪ್ತ ಪ್ರತಿಭೆಗೆ ಪ್ರೋತ್ಸಾಹ ನೀಡಿ: ವಿ. ಪ್ರಶಾಂತ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:17 IST
Last Updated 26 ಜನವರಿ 2022, 3:17 IST
ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಯುವ ಸಪ್ತಾಹದ ಅಂಗವಾಗಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪುಸ್ತಕ ವಿತರಿಸಲಾಯಿತು
ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಯುವ ಸಪ್ತಾಹದ ಅಂಗವಾಗಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪುಸ್ತಕ ವಿತರಿಸಲಾಯಿತು   

ಶಿಡ್ಲಘಟ್ಟ: ‘ಪ್ರತಿ ಮಗುವಿನಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ, ಕಲೆ, ಸಂಗೀತ, ಕೌಶಲ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಜನ್ಮದತ್ತವಾಗಿ ಬಂದಿರುವ ಅರಿವನ್ನು ಜಾಗೃತಗೊಳಿಸಬೇಕು’ ಎಂದು ನೆಹರೂ ಯುವ ಕೇಂದ್ರದ ಪ್ರತಿನಿಧಿ ವಿ. ಪ್ರಶಾಂತ್ ತಿಳಿಸಿದರು.

ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ನೆಹರೂ ಯುವ ಕೇಂದ್ರದಿಂದ ಯುವ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಯುವಜನೋತ್ಸವ, ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಜನರಲ್ಲಿ ನೈತಿಕ, ಆಧ್ಯಾತ್ಮಿಕ, ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಕಲೆ, ಯೋಗ, ನೃತ್ಯ, ಸಂಗೀತ ಚಟುವಟಿಕೆಗಳ ಮೂಲಕ ಮರುಹುಟ್ಟು ಕೊಡಬೇಕು. ಪಠ್ಯ ಮತ್ತು ಔಪಚಾರಿಕ ಶಿಕ್ಷಣದೊಂದಿಗೆ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ, ಸಂಸ್ಕಾರ ಕೊಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, ದೇಶದಲ್ಲಿ ಪ್ರತಿಭಾ ಪಲಾಯನವಾಗದಂತೆ ನೋಡಿಕೊಳ್ಳಬೇಕು. ಯುವಪೀಳಿಗೆಯ ಮನಸ್ಸು, ಭಾವನೆಗಳನ್ನು ಅರಳಿಸುವ ಚಟುವಟಿಕೆಗಳು ಹೆಚ್ಚು ಆಯೋಜನೆಗೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಕಲೆ, ಸಂಗೀತ, ಸಂಸ್ಕೃತಿ ಉಳಿಸುವಲ್ಲಿ ಎಲ್ಲರ ಪಾತ್ರವಿದೆ. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಪೀಳಿಗೆಯು ಮಾದರಿಯಾಗಿ ಸ್ವೀಕರಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ನೃತ್ಯ, ಗೀತಗಾಯನ, ಭಾಷಣ ಸ್ಪರ್ಧೆ ನಡೆಸಿ ಪ್ರಶಸ್ತಿ ಪತ್ರ, ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.

ಎನ್‌ಎಸ್‌ಎಸ್‌ ಸ್ವಯಂಸೇವಕ ಜಿ.ಎನ್. ಗಗನ್, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕಿ ತಾಜೂನ್, ಶಿಕ್ಷಕ ಎ.ಬಿ. ನಾಗರಾಜ, ಬಿ. ನಾಗರಾಜು, ಲಕ್ಷ್ಮಯ್ಯ, ಅಂಗನವಾಡಿ ಕಾರ್ಯಕರ್ತೆ ಜಯಂತಿ, ಮಂಜುಳಾ, ಗ್ರಾಮಸ್ಥರಾದ ಶ್ರೀನಿವಾಸ್, ಭರತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.