ಚಿಂತಾಮಣಿ: ದೇಶದಾದ್ಯಂತ ಕಾರ್ಗಿಲ್ ವಿಜಯೋತ್ಸವ ನಡೆಯುತ್ತಿದ್ದರೆ, ಅಂಬಾಜಿದುರ್ಗ ಹೋಬಳಿಯ ರಾಯಪ್ಪಲ್ಲಿ ಗ್ರಾಮದ ಮಾಜಿ ಸೈನಿಕ ಶಿವಾನಂದರೆಡ್ಡಿ ಅವರು ಜಮೀನು ಮಂಜೂರಾತಿಗಾಗಿ ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರದಿಂದ ತಮ್ಮ ಕುಟುಂಬ ಸಹಿತವಾಗಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.
ಶಿವಾನಂದರೆಡ್ಡಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಗಡಿಭಾಗದಲ್ಲಿ ನಡೆದ ಅಪಘಾತದಲ್ಲಿ ಕಾಲಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದಾಗಿ ಸೇನೆಯಿಂದ ಕಡ್ಡಾಯ ನಿವೃತ್ತಿ ಪಡೆದಿದ್ದರು. ಯೋಧಗೆ ಜಮೀನು ಮಂಜೂರು ಮಾಡುವಂತೆ ಸೈನ್ಯದ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಇದಾಗಿ ಎರಡೂವರೆ ದಶಕ ಕಳೆದರೂ, ಅವರಿಗೆ ಇನ್ನೂ ಜಮೀನು ಮಂಜೂರಾಗಿಲ್ಲ.
‘ಇದು ನಮ್ಮ ದೇಶದಲ್ಲಿ ಮಾಜಿ ಯೋಧರಿಗೆ ಸರ್ಕಾರ ನೀಡಿದ ಗೌರವ’ ಎಂದು ಮಾಜಿ ಯೋಧ ಶಿವಾನಂದರೆಡ್ಡಿ ಅವಲತ್ತುಕೊಂಡಿದ್ದಾರೆ.
‘ಜಮೀನಿಗಾಗಿ 26 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ಮುಖ್ಯ ಮಂತ್ರಿ, ಸಚಿವರು, ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಅಧಿಕಾರಿಗಳ ಗಮನಕ್ಕೂ ತಂದಿದ್ದೆ. ಪ್ರಯೋಜನವಾಗಿಲ್ಲ. ಹೀಗಾಗಿ, ಉಪವಾಸ ಸತ್ಯಾಗ್ರಹ ಕುಳಿತಿದ್ದೇನೆ. ಜಮೀನು ಮಂಜೂರಾತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳನ್ನು ಲೋಕಾ
ಯುಕ್ತರಿಗೆ ಹಿಡಿದು ಕೊಟ್ಟಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.