ಚಿಕ್ಕಬಳ್ಳಾಪುರ: ‘ಧಾರವಾಡ ಕಲಾ ಭವನದಲ್ಲಿ ಜುಲೈ 21 ರಂದು ರೈತಸಂಘದ ವತಿಯಿಂದ 39ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ರೈತಸಂಘದ ಜಿಲ್ಲಾ ಘಟಕ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನರಗುಂದದಲ್ಲಿ 1980ರಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ಗೆ 153 ರೈತರು ಬಲಿಯಾಗಿದ್ದರು. ಅದರ ನೆನಪಿಗಾಗಿ ಪ್ರತಿ ವರ್ಷ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ’ ಎಂದು ಹೇಳಿದರು.
‘ರಾಜ್ಯದ ಹಾಲು ಒಕ್ಕೂಟಗಳು ಒಂದು ಲೀಟರ್ ಹಾಲಿನ ಮೇಲೆ ₹16 ಲಾಭ ಪಡೆದು, ರೈತರಿಗೆ ಮೋಸ ಮಾಡುತ್ತಿವೆ. ಸರ್ಕಾರ ಪ್ರತಿ ಲೀಟರ್ ಹಾಲಿಗೆ ₹45 ದರ ನಿಗದಿ ಮಾಡಬೇಕು. ರೇಷ್ಮೆ ಆಮದು ಶುಲ್ಕವನ್ನು ಶೇ 50ಕ್ಕೆ ಏರಿಕೆ ಮಾಡಬೇಕು. ಬಯಲುಸೀಮೆಯ ನೀರಾವರಿ ಯೋಜನೆಯನ್ನು ಸಮರೋಪಾದಿಯಲ್ಲಿ ಮುಗಿಸಿ, ಕೆರೆಗಳನ್ನು ತುಂಬಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಸಮಾವೇಶದಲ್ಲಿ ಆಗ್ರಹಿಸಲಾಗುವುದು’ ಎಂದರು.
ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಿ.ವಿ.ಕೃಷ್ಣಪ್ಪ. ಕಾರ್ಯದರ್ಶಿ ಮಂಡಿಕಲ್ ವೇಣು, ಪದಾಧಿಕಾರಿಗಳಾದ ತಾದೂರು ಮಂಜುನಾಥ್, ಎಚ್.ಪಿ.ರಮಾನಾಥ್, ಮಂಜುನಾಥ್, ಇಸ್ಸಾರ್ ಅಹಮದ್, ಟಿ ಕೃಷ್ಣಪ್ಪ, ರಾಮಕೃಷ್ಣಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.