
ಚಿಕ್ಕಬಳ್ಳಾಪುರ: ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿನಿತ್ಯ ಗಾಂಧಿ ಭವನಕ್ಕೆ ಭೇಟಿ ನೀಡುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
ನಗರದ ಗಾಂಧಿ ಭವನಕ್ಕೆ ಗುರುವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜೀವನ ಸಂದೇಶಗಳು ಮತ್ತು ಆದರ್ಶಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ₹3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಿಸಿದೆ. ಗಾಂಧಿ ಭವನವು ಚೆನ್ನಾಗಿ ಮೂಡಿಬಂದಿದೆ. ಈ ಸುಂದರ ಭವನಕ್ಕೆ ಇನ್ನಷ್ಟು ಮೂಲ ಸೌಕರ್ಯ, ಆಕರ್ಷಣೆಗಳನ್ನು ಕಲ್ಪಿಸಿ ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭವನಕ್ಕೆ ಭೇಟಿ ನೀಡುವಂತೆ ಪ್ರೇರೇಪಣೆ ಮಾಡಬೇಕು ಎಂದು ಹೇಳಿದರು.
ಆ ನಿಟ್ಟಿನಲ್ಲಿ ಗಾಂಧಿ ಭವನ ನಿರ್ವಹಣಾ ಸಮಿತಿ ರಚಿಸಬೇಕು. ಚಿಕ್ಕಬಳ್ಳಾಪುರ ನಗರಸಭೆಯ ಪೌರಾಯುಕ್ತರನ್ನು ಸಮಿತಿ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಬೇಕು. ಗಾಂಧಿ ಭವನದ ಸ್ವಚ್ಚತೆ ಸೇರಿದಂತೆ ಇತರ ನಿರ್ವಹಣೆಗಳನ್ನು ಸಮಪರ್ಕವಾಗಿ ಹಾಗೂ ಅರ್ಥ ಪೂರ್ಣವಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಅವರು ಗಾಂಧಿ ಅಂಗಳ, ಛಾಯಾಚಿತ್ರ ಗ್ಯಾಲರಿ ಹಾಗೂ ಸಭಾಂಗಣವನ್ನು ವೀಕ್ಷಿಸಿದರು.
ತಹಶೀಲ್ದಾರ್ ರಶ್ಮಿ, ನಗರಸಭೆ ಪೌರಾಯುಕ್ತ ಮನ್ಸೂರ್ ಆಲಿ, ಪರಿಸರ ಎಂಜಿನಿಯರ್ ಉಮಾಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಾರ್ತಾ ಸಹಾಯಕ ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.