ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿ ಮುನ್ನ ದಿನವಾದ ಮಂಗಳವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಕಾರಣ ಹೂವು, ಹಣ್ಣಿನ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿತ್ತು.
ನಗರದ ಸುತ್ತಲಿನ ಸಂಘ ಸಂಸ್ಥೆಗಳ ಜನರು ಗಣೇಶನ ಮೂರ್ತಿ ಖರೀದಿಸಲು ವಾಹನಗಳ ಸಮೇತ ಬಂದಿದ್ದ ಕಾರಣ ಬಿ.ಬಿ.ರಸ್ತೆಯಲ್ಲಿ ಸಂಚಾರ ದಟ್ಟಣೆ ಇತ್ತು. ಬಜಾರ್ ರಸ್ತೆ, ಎಂ.ಜಿ.ರಸ್ತೆ, ಸಂತೆ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ಹಬ್ಬದ ವ್ಯಾಪಾರ ಬೆಳಿಗ್ಗೆಯಿಂದಲೇ ಆರಂಭಗೊಂಡಿತು.
ಸಂಜೆಯ ಹೊತ್ತಿಗಾಗಲೇ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ಹಬ್ಬದ ವಹಿವಾಟು ರಾತ್ರಿಯ ತನಕವೂ ಮುಂದುವರಿದಿತ್ತು.
ರಸ್ತೆಯ ಇಕ್ಕೆಲಗಳಲ್ಲಿ ಹಣ್ಣು, ಹೂವು, ತೆಂಗಿನಕಾಯಿ, ಗರಿಕೆ ಪತ್ರೆ, ಬಾಳೆಕಂದು, ಮಾವಿನಸೊಪ್ಪು, ಸಿಹಿ ತಿನಿಸುಗಳ ತಾತ್ಕಾಲಿಕ ಅಂಗಡಿ ತೆರೆದ ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯುತ್ತಿದ್ದರು.
ಹೂವು ಮಾರುಕಟ್ಟೆಯಲ್ಲಿ ಜನಜಂಗುಳಿ: ನಗರ ಕೆ.ವಿ.ಕ್ಯಾಂಪಸ್ ಬಳಿಯ ಹೂ ಮಾರುಕಟ್ಟೆಯು ಜನರಿಂದ ತುಂಬಿತುಳುಕಿತ್ತು. ಹಬ್ಬದ ಕಾರಣ ನೆರೆಯ ಜಿಲ್ಲೆಗಳ ಜನರೂ ಮಾರುಕಟ್ಟೆಗೆ ಹೂ ಖರೀದಿಗೆ ಬಂದಿದ್ದರು.
ಮಾರುಕಟ್ಟೆಯ ಮುಂಭಾಗದಲ್ಲಿ ಹಣ್ಣು, ಕಾಯಿಯ ವಹಿವಾಟು ಸಹ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.