ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗಣೇಶೋತ್ಸವ ಸಂಭ್ರಮ

ಬಡಾವಣೆಗಳಲ್ಲಿ ಪ್ರತಿಷ್ಠಾಪನೆಯಾಗಿವೆ ಗಣೇಶ ಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 14:30 IST
Last Updated 8 ಸೆಪ್ಟೆಂಬರ್ 2024, 14:30 IST
ಸಿದ್ಧಿ ವಿನಾಯಕ ಗೆಳೆಯರ ಸಂಘವು ಮುನ್ಸಿಪಲ್ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ 
ಸಿದ್ಧಿ ವಿನಾಯಕ ಗೆಳೆಯರ ಸಂಘವು ಮುನ್ಸಿಪಲ್ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ    

ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳ ಬಡಾವಣೆಗಳು, ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳಿಗೆ ನಿತ್ಯವೂ ವಿಶೇಷ ಪೂಜೆ, ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಅದ್ಧೂರಿಯಾಗಿ ನಡೆಯುತ್ತಿವೆ.

ಭಾದ್ರಪದ ಮಾಸದ ಚೌತಿಯ ದಿನವಾದ ಶನಿವಾರ ಜಿಲ್ಲೆಯಾದ್ಯಂತ ಗಣಪತಿ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಗಲ್ಲಿ ಗಲ್ಲಿಗಳಲ್ಲಿ, ಊರು ಕೇರಿಗಳಲ್ಲಿ, ನಗರ, ಪಟ್ಟಣ ಪ್ರದೇಶ ಹೀಗೆ ಎಲ್ಲೆಂದರಲ್ಲಿ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ವಿಘ್ನವಿನಾಶಕನ ಮೂರ್ತಿಗಳಿಗೆ ನಿತ್ಯ ಬಗೆ ಬಗೆಯ ಪೂಜೆಗಳನ್ನು ಮಾಡುತ್ತಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಿತಿಗಳು ಹಬ್ಬಕ್ಕೆ ಮೆರಗು ತುಂಬುತ್ತಿವೆ. ನಗರದಲ್ಲಿ ಮನೆ ಮನೆಗಳಲ್ಲಿ ಕೂಡ ಗಜವದನನ ಆರಾಧನೆ ಬಹು ಜೋರಿನಿಂದಲೇ ನಡೆದಿದೆ.  

ADVERTISEMENT

ಜನರು ರಾತ್ರಿ ವೇಳೆ ಕುಟುಂಬ ಸಮೇತ ನಗರದ ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಲಂಬೋದರ ಮೂರ್ತಿಗಳ ದರ್ಶನ ಪಡೆಯಲು ಪ್ರದಕ್ಷಿಣೆ ಹಾಕುತ್ತಿದ್ದಾರೆ. ಅನೇಕ ಗಣೇಶೋತ್ಸವ ಸಮಿತಿಗಳು ಪ್ರಸಾದದ ವ್ಯವಸ್ಥೆ ಸಹ ಮಾಡಿವೆ.

ನಗರದ ವಾಪಸಂದ್ರ ಹಾಲಿನ ಡೇರಿ ಮುಂಭಾಗದಲ್ಲಿ ವಿದ್ಯಾ ಗಣಪತಿ ಕನ್ನಡಾಂಬೆ ಗೆಳೆಯರ ಸಂಘದಿಂದ ಗಣಪತಿ ಪ್ರತಿಷ್ಠಾಪಿಸಲಾಗಿದೆ. 32ನೇ ವರ್ಷದ ಗಣೇಶೋತ್ಸವದ ಹಿನ್ನೆಲೆಯಲ್ಲಿ ಈಶ್ವರ ಮತ್ತು ಪಾರ್ವತಿ ಮಧ್ಯೆ ರಾರಾಜಿಸುವ 20 ಅಡಿ ಎತ್ತರದ ಗಣಪ ಭಕ್ತರನ್ನು ಸೆಳೆಯುತ್ತಿದೆ. 

ವರ ವಿದ್ಯಾ ವಿನಾಯಕ ಗೆಳೆಯರ ಸಂಘದಿಂದ ವಾರ್ಡ್ ನಂಬರ್ ಒಂದರ ನರಸಿಂಹಸ್ವಾಮಿ ದೇವಾಲಯದಲ್ಲಿ 22 ಅಡಿ ಎತ್ತರದ ಬಲರಾಮ ಗಣಪತಿ, ಮುನ್ಸಿಫಲ್ ಬಡಾವಣೆಯಲ್ಲಿ ಸಿದ್ಧಿ ವಿನಾಯಕ ಗೆಳೆಯರ ಸಂಘವು ‍ಪ್ರತಿಷ್ಠಾಪಿಸಿರುವ 27ನೇ ವರ್ಷದ  ರಾಜ ಗಣಪತಿ ಗಮನ ಸೆಳೆಯುತ್ತಿದೆ. ಹೀಗೆ ನಗರದ ವಿವಿಧ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ಅದ್ಧೂರಿಯಾಗಿ ಪ್ರತಿಷ್ಠಾಪಿಸಲಾಗಿದೆ. 

ವಿದ್ಯಾ ಗಣಪತಿ ಕನ್ನಡಾಂಬೆ ಗೆಳೆಯರ ಸಂಘದ ಗಣಪತಿ
ವರ ವಿದ್ಯಾ ವಿನಾಯಕ ಗೆಳೆಯರ ಸಂಘದ ಗಣಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.