
ಗೌರಿಬಿದನೂರು: ನಗರದ ಸುಮಂಗಳಿ ಕಲ್ಯಾಣ ಮಂಟಪದಲ್ಲಿ ಎಂಎಸ್ಎಸ್ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ 33ನೇ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ ಉದ್ಘಾಟಿಸಿ ಮಾತನಾಡಿ, ತಂದೆ-ತಾಯಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಹೊಣೆಗಾರಿಕೆಯಿಂದ ಕೈ ತೊಳೆದುಕೊಳ್ಳದೆ ಸಮಾಜದಲ್ಲಿ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ತಯಾರು ಮಾಡಲು ಶಿಕ್ಷಕರೊಂದಿಗೆ ಸಹಕರಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಶ್ರಮಿಸುವವರು ಮಾತ್ರ ಗೆಲುವು ಪಡೆಯಲು ಸಾಧ್ಯ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳು ಮತ್ತು ಇತರ ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳದೆ ಜೀವನದಲ್ಲಿ ತಂದೆ-ತಾಯಿಗೆ ಹಾಗೂ ಗುರು-ಹಿರಿಯರಿಗೆ ಕೀರ್ತಿ ತರುವ ಗುರಿ ಇಟ್ಟುಕೊಂಡು ಉನ್ನತ ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕು. ಹಾಗೆಯೇ ಸಮಾಜ ಸೇವೆಯಲ್ಲಿಯೂ ಸಹ ಈ ವಿದ್ಯಾ ಸಂಸ್ಥೆಯು ತನ್ನದೆ ಆದ ಛಾಪು ಮೂಡಿಸಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜತೆಗೆ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಪೋಷಕರು ದಿನ ಪತ್ರಿಕೆಗಳನ್ನು ಮನೆಗೆ ತರಿಸುವ, ಓದುವ ಹವ್ಯಾಸ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ ಪಠಾಣ್ ಸೈಫುಲ್ಲಾ, ಫಾಹೀಮಾ ಖಾನಮ್, ಮೊಹಮ್ಮದ್ ಜೀಲಾನ್, ಡಾ.ಆಫ್ರೀದಿ ಪಠಾಣ್ , ಅಮೀನಾ ನೂರೈನ್, ಪಠಾಣ್ ರಹಮತುಲ್ಲಾ, ಮುಖ್ಯ ಶಿಕ್ಷಕರಾದ ಆನಂದ್ ಕುಮಾರ್, ರತ್ನಮ್ಮ, ರಾಜಾ ಹೊನ್ನಪ್ಪ ನಾಯಕ್, ಹಿರಿಯ ಶಿಕ್ಷಕರಾದ ಸರಸ್ವತಮ್ಮ, ಶಿವಲಿಂಗಪ್ಪ, ನರಸಿಂಹಮೂರ್ತಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.