
ಗೌರಿಬಿದನೂರು ತಾಲ್ಲೂಕಿನ ತಪಸಮಾಕಲಹಳ್ಳಿ ಗ್ರಾಮದಲ್ಲಿ ಒತ್ತುವರಿ ಜಾಗವನ್ನು ಬುಧವಾರ ತೆರವುಗೊಳಿಸಿದ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು
ಗೌರಿಬಿದನೂರು: ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ತಪಸಮಾಕಲಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದ ಪಂಚಾಯಿತಿ ಜಾಗವನ್ನು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಒತ್ತುವರಿದಾರ ಕುಟುಂಬ ಸದಸ್ಯರಾದ ಸುಶ್ಮಿತಾ ಮತ್ತು ಸ್ವಪ್ನ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದರು. ತಕ್ಷಣ ಪೊಲೀಸರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಕೆ. ಹೊನ್ನಯ್ಯ ಮಾತನಾಡಿ, ‘ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ಕಾರಿ ಜಾಗವನ್ನು ಶಾಲೆ ಮತ್ತು ಅಂಗನವಾಡಿ ನಿರ್ಮಿಸಲು ಮೀಸಲಿಡಲಾಗಿತ್ತು. ಈ ಬಗ್ಗೆ ಸ್ಥಳ ಪರಿಶೀಲನೆ ವೇಳೆ ಪಕ್ಕದ ಮನೆಯವರು ಶಾಲೆ ಮತ್ತು ಅಂಗನವಾಡಿ ನಿರ್ಮಾಣಕ್ಕೆ ಮೀಸಲಿದ್ದ ಜಾಗವು ತಮಗೆ ಸೇರಿದ್ದು ಎಂದು ತಿಳಿಸಿದ್ದರು. ಪಂಚಾಯಿತಿಯಿಂದ ಮತ್ತೆ ಸ್ಥಳ ಪರಿಶೀಲಿಸಿದಾಗ, ಆ ಜಾಗದಲ್ಲಿ ಶೆಡ್ ನಿರ್ಮಿಸಲಾಗಿತ್ತು’ ಎಂದು ತಿಳಿಸಿದರು.
ಒತ್ತುವರಿದಾರರನ್ನು ಕರೆಸಿ ಶೆಡ್ ತೆರವುಗೊಳಿಸಲು ಸೂಚಿಸಲಾಗಿತ್ತು. ಆದರೆ, ಅವರು ತೆರವುಗೊಳಿಸಲಿಲ್ಲ. ಹೀಗಾಗಿ, ಬುಧವಾರ ಪೊಲೀಸ್ ಬಂದೋಬಸ್ತ್ನಲ್ಲಿ ಶೆಡ್ ತೆರವುಗೊಳಿಸಲಾಯಿತು ಎಂದರು.
ಖಾಸಗಿ ವ್ಯಕ್ತಿಗಳು ತಮ್ಮ ಮನೆ ದಾಖಲೆಗಳನ್ನು ತೋರಿಸಿ, ಈ ಜಾಗವೂ ಸಹ ತಮ್ಮದೇ ಎನ್ನುತ್ತಿದ್ದಾರೆ. ಜಾಗಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳು ಅವರ ಬಳಿ ಇಲ್ಲದ ಕಾರಣ ಪೊಲೀಸ್ ಬಂದೋಬಸ್ತ್ನಲ್ಲಿ ಶೆಡ್ ತೆರವುಗೊಳಿಸಲಾಯಿತು. ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಈವರೆಗೆ ನಿವೇಶನ ಇಲ್ಲದಿರುವವರು ಅರ್ಜಿ ಹಾಕಿಕೊಂಡರೆ, ಪರಿಶೀಲನೆ ಮಾಡಿ ಪಂಚಾಯಿತಿ ವತಿಯಿಂದ ನಿವೇಶನ ಮಂಜೂರು ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.