
ಗೌರಿಬಿದನೂರು: ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹಜ ಹೆರಿಗೆಗಿಂತ ಸಿಸೇರಿಯನ್ ಹೆರಿಗೆಗಳ ಸಂಖ್ಯೆಯೇ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ನಿಯಮವಿದೆ. ಆದರೆ, ಈ ನಿಯಮ ಪ್ರಾಯೋಗಿಕವಾಗಿ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ತಾಲ್ಲೂಕಿನ ಬಡ ಮತ್ತು ಮಧ್ಯಮ ವರ್ಗದ ಗರ್ಭಿಣಿಯರು ಹೆರಿಗೆಗಾಗಿ ಹೆಚ್ಚಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ, ಈ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗಿಂತ ಸಿಸೇರಿಯನ್ ಹೆರಿಗೆಗಳೇ ಹೆಚ್ಚಾಗಿವೆ. ಅತ್ಯಂತ ಅನಿವಾರ್ಯ ಮತ್ತು ಅವಶ್ಯ ಸಂದರ್ಭದಲ್ಲಿ ಮಾತ್ರ ವೈದ್ಯರು ಸುರಕ್ಷಿತ ಹೆರಿಗೆಗೆ ಒತ್ತು ನೀಡಿ ಸಿಸೇರಿಯನ್ ಮಾಡಿಸಬೇಕು. ಆದರೆ, ಬದಲಾದ ಜನರ ಜೀವನ ಶೈಲಿ, ಜಡತ್ವದ ಬದುಕು ಸೇರಿದಂತೆ ಹಲವು ಕಾರಣಗಳಿಂದ ಸಹಜ ಹೆರಿಗೆಗಿಂತ ಸಿಸೇರಿಯನ್ ಹೆರಿಗೆಗಳೇ ಹೆಚ್ಚಾಗಿವೆ ಎಂಬ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಗರ್ಭಿಣಿಯರ ಸುರಕ್ಷತೆ ಮತ್ತು ಸಹಜ ಹೆರಿಗೆಗೆ ಮೊದಲ ಆದ್ಯತೆ ನೀಡುತ್ತಾರೆ. ಅವರು ಉಚಿತವಾಗಿ ಹೆರಿಗೆ ಮಾಡಿಸುತ್ತಾರೆ ಎಂಬ ಕಾರಣಕ್ಕೆ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಸರ್ಕಾರಿ ಆಸ್ಪತ್ರೆಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಸಹಜ ಹೆರಿಗೆ ಅಥವಾ ಸಿಸೇರಿಯನ್ ಮಾಡಿಸಿಕೊಳ್ಳುವುದು ಅವರ ವೈಯಕ್ತಿಕ ಆಯ್ಕೆ. ಇದು ಬಹಳ ಸೂಕ್ಷ್ಮ ವಿಚಾರವೂ ಆಗಿದೆ. ಆದರೆ, ಅನಗತ್ಯವಾಗಿ ಸಿಸೇರಿಯನ್ ಮಾಡುವುದರಿಂದ ಭವಿಷ್ಯದಲ್ಲಿ ಮಹಿಳೆಯರಿಗೆ ತೊಂದರೆ ಉಂಟಾಗುವ ಸಂಭವ ಇರುತ್ತದೆ ಎಂಬುದು ಪ್ರಜ್ಞಾವಂತ ಮಹಿಳೆಯರ ಮಾತು.
ಕೆಲವು ಬಾರಿ ವೈದ್ಯರು ಅಥವಾ ಸಿಬ್ಬಂದಿ ಸಹಜ ಹೆರಿಗೆ ಮಾಡಲು ಮೀನಮೇಷ ಎಣಿಸುತ್ತಾರೆ. ಅನಗತ್ಯವಾಗಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಾರೆ. ಹಣಕ್ಕೆ ಬೇಡಿಕೆ ಇಡುವ ಆರೋಪವೂ ಇದೆ. ಸಿಬ್ಬಂದಿಯೇ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುವುದು, ಆಂಬುಲೆನ್ಸ್ ವಿಳಂಬ ಮಾಡುವುದು ಸೇರಿದಂತೆ ನಾನಾ ಕಾರಣದಿಂದ ಸಹಜ ಹೆರಿಗೆಗೆ ತೊಡಕಾಗಿದೆ ಎಂಬುದು ಸಾರ್ವಜನಿಕರ ಆರೋಪ.
ಅಂಕಿ ಅಂಶ ಏನು ಹೇಳುತ್ತದೆ: ತಾಲ್ಲೂಕಿನ ಹೊಸೂರು, ಮಂಚೇನಹಳ್ಳಿ, ನಾಮಗೊಂಡ್ಲು, ವಾಟದಹೊಸಹಳ್ಳಿ, ಅಲ್ಲಿಪುರ, ಡಿ.ಪಾಳ್ಯ, ಇಡಗೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 2025 ಏಪ್ರಿಲ್ನಿಂದ 2026 ಜ.ತಿಂಗಳವರೆಗೆ 196 ಗರ್ಭಿಣಿಯರು ಚಿಕಿತ್ಸೆ ಪಡೆದಿದ್ದಾರೆ. ನಂತರ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ 517 ಗರ್ಭಿಣಿಯರ ಪೈಕಿ 419 ಮಂದಿಗೆ ವೈದ್ಯರು ಸಿಸೇರಿಯನ್ ಹೆರಿಗೆ ಮಾಡಿಸಿದ್ದಾರೆ. ಇದು ಶೇ80ಕ್ಕೂ ಹೆಚ್ಚಿನ ಪ್ರಮಾಣವಾಗಿದೆ. ಒಟ್ಟಾರೆ ತಾಲ್ಲೂಕಿನಲ್ಲಿ 2,397 ಮಂದಿ ಹೆರಿಗೆಗೆ ದಾಖಲಾಗಿದ್ದಾರೆ. ಅದರಲ್ಲಿ 1,411 ಮಂದಿ ಸಿಸೇರಿಯನ್ ಹೆರಿಗೆಗೆ ಒಳಗಾಗಿದ್ದಾರೆ. ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿದಿನ ಕನಿಷ್ಠ 8 ರಿಂದ 10 ಜನ ಗರ್ಭಿಣಿಯರು ದಾಖಲಾಗುತ್ತಿದ್ದಾರೆ. ಶೇಕಡವಾರು ಪ್ರಮಾಣದಲ್ಲಿ ಸಹಜ ಹೆರಿಗೆಗಿಂತ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಿರುವುದು ಕಳವಳಕಾರಿಯಾಗಿದೆ.
ಸಿಸೇರಿಯನ್ ಹೆಚ್ಚಳಕ್ಕೆ ಕಾರಣ: ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಜವಾಗಿ ರೋಗಿಗಳ ಒತ್ತಡ ಹೆಚ್ಚಾಗಿದೆ. ವೈದ್ಯರ ಮತ್ತು ಸಿಬ್ಬಂದಿ ಕೊರತೆ ಇದೆ. ಹೆರಿಗೆ ಸಮಯದಲ್ಲಿ ನಿರ್ವಹಣೆ ಕೊರತೆ ಕಂಡು ಬರುತ್ತದೆ. ಗರ್ಭಿಣಿಯರಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆಗಳಿರುತ್ತವೆ. ತಾಯಿ ಆರೋಗ್ಯ ಸ್ಥಿತಿ ಮುಖ್ಯ ಕಾರಣವಾಗಿದೆ. ಈ ಎಲ್ಲ ಕಾರಣಗಳಿಂದ ಸಹಜ ಹೆರಿಗೆ ಬದಲಿಗೆ ತ್ವರಿತವಾಗಿ ಸಿಸೇರಿಯನ್ ಮಾಡುವ ಅನಿವಾರ್ಯತೆ ಎದುರಾಗುತ್ತದೆ ಎಂಬುದು ವೈದ್ಯರ ಸ್ಪಷ್ಟನೆ. ಆದರೆ, ಕೆಲ ವೈದ್ಯರು ಸಹಜ ಹೆರಿಗೆಗೆ ನಿರಾಸಕ್ತಿ ತೋರುವ ದೂರು ತಳ್ಳಿ ಹಾಕುವಂತಿಲ್ಲ.
ಶಾಸಕ ಎಚ್ಚರಿಕೆ: ಶಾಸಕ ಪುಟ್ಟಸ್ವಾಮಿಗೌಡ ಅವರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಹಲವು ಸಭೆಗಳಲ್ಲಿ ಸಹಜ ಹೆರಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ. ಸಿಜೇರಿಯನ್ ನಿಂದ ಹೆಣ್ಣು ಮಕ್ಕಳಿಗೆ ಕಾಲ ಕ್ರಮೇಣ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಶೇ90ರಷ್ಟು ಸಹಜ ಹೆರಿಗೆ ಮಾಡಿಸಬೇಕೆಂದು ವೈದ್ಯರಿಗೆ ಎಚ್ಚರಿಕೆ ನೀಡಿದ್ದರು.
‘ಶಾರೀರಿಕವಾಗಿ ಶಕ್ತಿವಂತರಲ್ಲ’
ನಗರ ಭಾಗದ ಕೆಲವು ಮಹಿಳೆಯರು ಶಾರೀರಿಕವಾಗಿ ಶಕ್ತಿವಂತರಾಗಿರುವುದಿಲ್ಲ. ಹೆರಿಗೆ ನೋವು ಭರಿಸುವ ಶಕ್ತಿ ಅವರಿಗೆ ಇರುವುದಿಲ್ಲ. ಇದರಿಂದ ಅವರ ಮನೆಯವರು ಸಿಸೇರಿಯನ್ ಮಾಡಿಸಲು ಬಯಸುತ್ತಾರೆ. ಕೆಲವರಿಗೆ ಮೊದಲನೇ ಬಾರಿ ಸಿಸೇರಿಯನ್ ಆಗಿರುತ್ತದೆ. ಇಂತಹವರಿಗೆ ಎರಡನೇ ಬಾರಿ ಸಹಜ ಹೆರಿಗೆ ಕಷ್ಟವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕೆಲವರು ಬೇರೆಡೆ ಚಿಕಿತ್ಸೆ ಪಡೆದು ಕೊನೆ ಸಮಯದಲ್ಲಿ ಬಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಹಲವು ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್ ಹೆರಿಗೆ ಹೆಚ್ಚಾಗಿದೆ ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಲಕ್ಷ್ಮೀಕಾಂತ್ ಹೇಳುತ್ತಾರೆ.
‘ದೈಹಿಕ ಶ್ರಮ ಗೊತ್ತಿಲ್ಲ ’
ಈಗಿನ ಮಹಿಳೆಯರು ಜಮೀನು ಅಥವಾ ತೋಟದಲ್ಲಿ ದೈಹಿಕ ಶ್ರಮದ ಕೆಲಸ ಮಾಡುವುದಿಲ್ಲ. ಕೇವಲ ಅಡುಗೆ ಮನೆ ಮತ್ತು ಸಾಪ್ಟ್ವೇರ್ ಕೆಲಸಗಳಿಗೆ ಸೀಮಿತರಾಗಿದ್ದಾರೆ. ಇದರಿಂದ ಹೆರಿಗೆ ನೋವು ಭರಿಸುವ ಶಕ್ತಿ ಅವರಿಗೆ ಇರುವುದಿಲ್ಲ. ಹೀಗಾಗಿ ಸಿಸೇರಿಯನ್ ಹೆರಿಗೆ ಹೆಚ್ಚಾಗುತ್ತಿವೆ ಎಂದು ಗೃಹಿಣಿ ಲಕ್ಷ್ಮಿ ಅಭಿಪ್ರಾಯಪಡುತ್ತಾರೆ.
‘ಬದಲಾದ ಮನೋದೃಷ್ಟಿ ’
ಈಚೆಗೆ ವೈದ್ಯರು ಮಹಿಳೆಯರ ದೀರ್ಘಾವಧಿ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಈ ಕ್ಷಣದಲ್ಲಿ ಬರುವ ಕೆಲಸವನ್ನು ಮುಗಿಸಿದರೆ ಸಾಕು ಎನ್ನುವ ಮನೋಭಾವ ಹೊಂದಿದ್ದಾರೆ. ಇದರಿಂದಲೇ ತಾಲ್ಲೂಕಿನಲ್ಲಿ ಸಿಸೇರಿಯನ್ ಆಪರೇಷನ್ ಸಂಖ್ಯೆ ಮಿತಿ ಮೀರುತ್ತಿದೆ ಎಂದು ಖಾಸಗಿ ಆಸ್ಪತ್ರೆ ಉದ್ಯೋಗಿ ಚೈತನ್ಯ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.