ಗೌರಿಬಿದನೂರು: ತಾಲ್ಲೂಕಿನ ಬಹುತೇಕ ರೈತರು ಸಾಂಪ್ರದಾಯಿಕ ಕೃಷಿ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದಾಯದ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಉಪ ಕಸುಬುಗಳಾಗಿ, ಕುರಿ, ಕೋಳಿ, ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.
ಇದೇ ಹೊತ್ತಿನಲ್ಲಿ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪುಷ್ಪ ಕೃಷಿಯೂ ನಡೆಯುತ್ತಿದೆ. ಹೀಗೆ ದೊಡ್ಡ ಪ್ರಮಾಣದಲ್ಲಿ ಪುಷ್ಪ ಕೃಷಿ ನಡೆಯುತ್ತಿರುವುದರಿಂದ ಪರೋಕ್ಷವಾಗಿ ಜೇನು ಕೃಷಿಗೆ ಹೆಚ್ಚಿನ ಅವಕಾಶಗಳು ಇರುತ್ತವೆ.
ಆದರೆ ತಾಲ್ಲೂಕಿನಲ್ಲಿ ಕಡಿಮೆ ಖರ್ಚು ಮತ್ತು ಕಡಿಮೆ ನಿರ್ವಹಣೆ ಇರುವ ಜೇನು ಕೃಷಿ ಕಡೆಗೆ ರೈತರು ನಿರಾಸಕ್ತಿ ತೋರಿದ್ದಾರೆ.
ತಾಲ್ಲೂಕಿನಲ್ಲಿ 54,782 ಹೆಕ್ಟೇರ್ನಲ್ಲಿ 1,15,627 ರೈತರು ಕೃಷಿ ಮಾಡುತ್ತಿದ್ದಾರೆ. ಇದರಲ್ಲಿ 713.93 ಹೆಕ್ಟೇರ್ ಜಮೀನಿನಲ್ಲಿ ರೈತರು ಪುಷ್ಪೋದ್ಯಮವನ್ನು ಕಸುಬಾಗಿ ಮಾಡುತ್ತಿದ್ದಾರೆ.
ಪುಷ್ಪೋದ್ಯಮದ ಜೊತೆಯಲ್ಲಿ ಉಪ ಕಸುಬಾಗಿ ಜೇನು ಕೃಷಿ ಅಳವಡಿಸಿಕೊಂಡರೆ, ಆದಾಯದ ಪರ್ಯಾಯ ಮಾರ್ಗವನ್ನು ಸೃಷ್ಟಿಸಿಕೊಳ್ಳಲು ಅವಕಾಶಗಳಿವೆ. ಸರ್ಕಾರ ಸಹ ಜೇನು ಕೃಷಿ ಪ್ರೋತ್ಸಾಹಿಸಲು ಎಸ್ಸಿ, ಎಸ್ಟಿ ರೈತರಿಗೆ ಶೇ 90 ಮತ್ತು ಸಾಮಾನ್ಯ ವರ್ಗದ ರೈತರಿಗೆ ಶೇ 75 ಸಹಾಯ ಧನ ನೀಡುತ್ತಿದೆ.
ಜೇನು ತುಪ್ಪ ಮತ್ತು ಮೇಣಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ರೈತರಿಗೆ ಮತ್ತು ನಿರುದ್ಯೋಗಿ ಯುವ ಜನರಿಗೆ ಜೇನು ಕೃಷಿಯು ಸ್ವಯಂ ಉದ್ಯೋಗದ ಆಶಾದಾಯಕ ಅವಕಾಶ.
ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳ ಜೊತೆಗೆ ಜೇನು ಕೃಷಿ ಮಾಡುವುದರಿಂದ ಆದಾಯವೂ ಹೆಚ್ಚಾಗುತ್ತದೆ. ರೈತರು ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯನ್ನು ಮನವರಿಕೆ ಮಾಡಿಕೊಂಡು, ತಮ್ಮ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿ ಜೊತೆಗೆ ಜೇನು ಕೃಷಿ ಕೈಗೊಳ್ಳುವುದರಿಂದ ಬೆಳೆಗಳಲ್ಲಿ ಪರಾಗ ಸ್ಪರ್ಶಕ್ರಿಯೆ ಹೆಚ್ಚಾಗಿ ಶೇ 30ರಷ್ಟು ಇಳುವರಿ ಹೆಚ್ಚಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಹೀಗೆ ಉತ್ತಮ ಅವಕಾಶಗಳು ಜೇನು ಕೃಷಿ ಇದ್ದರೂ ತಾಲ್ಲೂಕಿನಲ್ಲಿ ಮಾತ್ರ ಜೇನು ಕೃಷಿಯ ಬೆಳವಣಿಗೆಗಳು ಇಲ್ಲ.
ಒಂದು ಎಕರೆಯಲ್ಲಿ ಕನಿಷ್ಠ 20 ಜೇನು ಪೆಟ್ಟಿಗಗಳನ್ನು ಇಡಬಹುದು. ತಾಲ್ಲೂಕಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಈಗಾಗಲೇ 500 ಜೇನು ಸಾಕಣೆ ಪೆಟ್ಟಿಗೆಗಳನ್ನು ವಿತರಣೆ ಮಾಡಲಾಗಿದೆ. 200 ಜೇನು ಪೆಟ್ಟಿಗೆಗಳಿಂದ ಜೇನು ಸಂಗ್ರಹಿಸಲಾಗುತ್ತಿದೆ.
ಒಂದು ಪೆಟ್ಟಿಗೆಯಿಂದ ಒಂದು ವರ್ಷಕ್ಕೆ 4 ಬಾರಿ ಕನಿಷ್ಠ 2 ಕೆ.ಜಿ ಜೇನುತುಪ್ಪ ತೆಗೆಯಬಹುದು. ಸರ್ಕಾರ ಒಂದು ಕೆ.ಜಿ ಜೇನು ತುಪ್ಪಕ್ಕೆ ₹ 450 ರಿಂದ ₹ 500 ನೀಡುತ್ತಿದೆ. ಮಾರುಕಟ್ಟೆಯಲ್ಲಿ ₹ 800 ಇದೆ. ಸೆಪ್ಟೆಂಬರ್ ನಿಂದ ಏಪ್ರಿಲ್ ಜೇನು ಸಂಗ್ರಹಣೆ ಮಾಡಲು ಉತ್ತಮ ಸಮಯ. ಜೇನು ಹುಳುಗಳು ಮರಿ ಮಾಡುವ ಸಮಯವೂ ಇದಾಗಿದೆ.
ರೈತರು ಬೇಸಾಯದ ಸಮಯದಲ್ಲಿ ಮಿತ್ರ ಕೀಟಗಳು ಯಾವುದು, ಶತ್ರು ಕೀಟಗಳು ಯಾವುದು ಎಂಬುದನ್ನು ಅರಿಯಬೇಕು. ಶತ್ರು ಕೀಟಗಳನ್ನು ನಾಶಪಡಿಸಲು ಔಷಧ ಸಿಂಪಡಿಸಿ ಮಿತ್ರ ಕೀಟಗಳನ್ನು ನಾಶ ಮಾಡಬಾರದು. ಔಷಧವನ್ನು ಅವಶ್ಯವಿರುವ ಕಡೆ, ಕನಿಷ್ಠ ಪ್ರಮಾಣದಲ್ಲಿ ಬಳಸಬೇಕು. ಇಲ್ಲವಾದಲ್ಲಿ ರೈತನ ಮಿತ್ರ ಕೀಟಗಳಾದ ಜೇನು ಹುಳುವು ನಾಶವಾಗುತ್ತದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.
ರೈತರಿಗೆ ಮಾಹಿತಿ ಕೊರತೆ
ತಾಲ್ಲೂಕಿನ ರೈತರಿಗೆ ಮಾಹಿತಿ ಕೊರತೆ ಇದೆ. ಜೊತೆಗೆ ಸರ್ಕಾರ ಒಂದು ಪೆಟ್ಟಿಗೆ ಕೊಳ್ಳಲು ₹ 4500 ನಿಗದಿಪಡಿಸಿರುವುದರಿಂದ ರೈತರು ಮುಂಗಡವಾಗಿ ಅಷ್ಟು ಹಣ ಕಟ್ಟಲು ನಿರಾಸಕ್ತಿ ತೋರುತ್ತಿದ್ದಾರೆ. ರಾಜ್ಯದ ಕೃಷಿ ಆಧಾರಿತ ಕಾಲೇಜುಗಳಲ್ಲಿ ಜೇನು ಕೃಷಿಯ ತರಬೇತಿ ಹಾಗೂ ಕಾರ್ಯಾಗಾರಗಳನ್ನು ರೈತರಿಗೆ ನೀಡಲಾಗುತ್ತಿದೆ. ರೈತರು ಜೇನು ಸಾಕಣೆಯನ್ನು ಮಾಡಿ ಲಾಭಗಳಿಸಬಹುದು.
- ಗಜೇಂದ್ರ ಜೇನು ಕೃಷಿ ಸಹಾಯಕ ಅಧಿಕಾರಿ ಗೌರಿಬಿದನೂರು
ಎಂಟು ವರ್ಷದಿಂದ ಜೇನು ಸಾಕಾಣಿಕೆ
ಕಳೆದ ಎಂಟು ವರ್ಷಗಳಿಂದ ಜೇನು ಸಾಕಣೆ ಮಾಡುತ್ತಿದ್ದೇನೆ. ಉತ್ತಮ ಆದಾಯದ ಜೊತೆಗೆ ನಮ್ಮ ಜಮೀನಿನಲ್ಲಿರುವ ಹಲಸು ಮಾವು ತೆಂಗು ಸಪೋಟ ಹಾಗೂ ಹೂವಿನ ಬೆಳೆಗಳಲ್ಲಿ ಇಳುವರಿ ಪ್ರಮಾಣ ಗಣನೀಯವಾಗಿ ಏರಿಕೆ ಆಗುತ್ತಿದೆ.
-ನಾಗಪ್ಪ, ಜೇನು ಸಾಕಣೆದಾರ, ಹುದುಗೂರು, ಗೌರಿಬಿದನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.