ಚಿಕ್ಕಬಳ್ಳಾಪುರ: ತಾಲ್ಲೂಕಿನ ಗ್ಲಾಡಿಯಸ್ ಹೂವಿನ ಘಮ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹರಡಿದೆ. ಜಿಲ್ಲೆಯಲ್ಲಿ ಹೂ ಬೇಸಾಯ ಪ್ರಮುಖವಾಗಿದೆ. ಸೇವಂತಿಗೆ, ಗುಲಾಬಿ, ಗ್ಲಾಡಿಯಸ್ ಮತ್ತಿತರ ಹೂಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಕತ್ರಿಗುಪ್ಪೆ, ಮರಳುಕುಂಟೆ, ಅಂಗರೇಖನಹಳ್ಳಿ, ನಲ್ಲಿಮರದಹಳ್ಳಿ, ಹಿರೇನಹಳ್ಳಿ, ಕಾಡದಿಬ್ಬೂರು ಗ್ರಾಮಗಳಲ್ಲಿ ಬಹಳಷ್ಟು ರೈತರು ಗ್ಲಾಡಿಯಸ್ ಬೆಳೆಯುತ್ತಾರೆ.
ಗ್ಲಾಡಿಯಸ್ ಹೂವಿಗೆ ನವದೆಹಲಿಯಲ್ಲಿ ಉತ್ತಮ ಮಾರುಕಟ್ಟೆ ಇದೆ. ಜುಲೈನಿಂದ ಅಕ್ಟೋಬರ್ವರೆಗೆ ಗ್ಲಾಡಿಯಸ್ ಹೂವಿನ ಕಾಲ. ಈ ಅವಧಿಯಲ್ಲಿ ಸಮೃದ್ಧ ಫಸಲು ದೊರೆಯುತ್ತದೆ. ಕತ್ರಿಗುಪ್ಪೆ ಹಾಗೂ ಸುತ್ತಲಿನ ಹಳ್ಳಿಗಳ ಜನರು ಈ ಅವಧಿಯಲ್ಲಿ ಗ್ಲಾಡಿಯಸ್ ಹೂವನ್ನು ನವದೆಹಲಿಗೆ ಕಳುಹಿಸುವರು. ಉಳಿದ ಸಮಯದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಮಾರುಕಟ್ಟೆಯನ್ನು ರೈತರು ಅವಲಂಬಿಸಿದ್ದಾರೆ.
‘ಕತ್ರಿಗುಪ್ಪೆಯಲ್ಲಿ ಸುಮಾರು 150 ಮನೆಗಳಿವೆ. ಶೇ 90ರಷ್ಟು ರೈತರು ಗ್ಲಾಡಿಯಸ್ ಹೂ ಬೆಳೆಯುವರು. 20 ಹೂಗಳ ಒಂದು ಕಂತೆ ಕಟ್ಟಲಾಗುವುದು. ಒಂದು ಬಾಕ್ಸ್ನಲ್ಲಿ 35ರಿಂದ 40 ಕಂತೆಗಳನ್ನು ಇರಿಸಿ ದೆಹಲಿಗೆ ಕಳುಹಿಸುತ್ತೇವೆ’ ಎಂದು ಕತ್ರಿಗುಪ್ಪೆಯ ರೈತ ರಾಮಾಂಜಿನಪ್ಪ ಮಾಹಿತಿ ನೀಡುತ್ತಾರೆ.
‘ಗ್ಲಾಡಿಯಸ್ನಿಂದ ರೈತರಿಗೆ ಒಳ್ಳೆಯದಾಗಿದೆ. 1981ರಿಂದ ಈ ಹೂ ಬೆಳೆಯುತ್ತಿದ್ದೇವೆ. 1983ರಿಂದ ಮಾರುಕಟ್ಟೆ ಕಂಡುಕೊಂಡಿದ್ದೇನೆ. 20 ಗುಂಟೆಯ ತಾಕುಗಳನ್ನು ವಿಂಗಡಿಸಿ ಹಂತ ಹಂತವಾಗಿ ಹೂ ಬೆಳೆಯಲಾಗುತ್ತದೆ. ಗಡ್ಡೆಗಳನ್ನು ನಾವೇ ಸ್ವಂತ ಉತ್ಪಾದನೆ ಮಾಡಿಕೊಳ್ಳುತ್ತೇವೆ. ಮಾರುಕಟ್ಟೆಗೆ ತೊಂದರೆಯಿಲ್ಲ’ ಎಂದು ವಿವರಿಸಿದರು.
ಕೊಟ್ಟಿಗೆ ಗೊಬ್ಬರ, ಔಷಧಿ, ರಾಸಾಯನಿಕ ಗೊಬ್ಬರಕ್ಕೆ ವೆಚ್ಚವಾಗುತ್ತದೆ. ಇಷ್ಟೆಲ್ಲವಾದರೂ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಈ ಬೆಳೆ ಸಹಕಾರಿ ಎಂದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.