
ಗೌರಿಬಿದನೂರು: ನ್ಯಾಯಾಂಗವು ಮಹಿಳೆಯರ ಸುರಕ್ಷತೆ, ಗೌರವ ಮತ್ತು ಹಕ್ಕುಗಳನ್ನು ಕಾಪಾಡಲು ಸದಾ ಬದ್ಧವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್. ಎನ್ ತಿಳಿಸಿದರು.
ನಗರದ ರೈಮಂಡ್ಸ್ ಕಾರ್ಖಾನೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ನ್ಯಾಯಾಧೀಶನಾಗಿ ಮಹಿಳೆಯರ ಹಕ್ಕು ಹಾಗೂ ಕಾನೂನು ರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಪ್ರಮುಖ ಕರ್ತವ್ಯವಾಗಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಸಮಾಜದ ಅಭಿವೃದ್ಧಿ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತವೆ. ಸಂವಿಧಾನವು ಮಹಿಳೆಯರಿಗೆ ಹಲವು ಮೂಲಭೂತ ಹಕ್ಕುಗಳನ್ನು ನೀಡಿದೆ. ಈ ಹಕ್ಕುಗಳನ್ನು ಮಹಿಳೆಯರು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಕಾನೂನು ಜ್ಞಾನ ಹೊಂದಬೇಕು’ ಎಂದು ಸಲಹೆ ನೀಡಿದರು.
ದೇಶದಲ್ಲಿ ಮಹಿಳೆಯರ ಅಭ್ಯುದಯಕ್ಕಾಗಿ ಹಲವು ಕಾನೂನುಗಳಿದ್ದರೂ, ದೌರ್ಜನ್ಯ ನಡೆದಾಗ ಮಹಿಳೆಯರು ಪ್ರಕರಣ ದಾಖಲಿಸಲು ಮುಂದಾಗುತ್ತಿಲ್ಲ. ಇತ್ತೀಚಿನ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಡಿಜಿಟಲ್ ದೌರ್ಜನ್ಯಗಳನ್ನು ತಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಫಯಾಜ್ ಪಟೇಲ್, ವಕೀಲರ ಸಂಘದ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ವಿ.ವಿಜಯ್ ಕುಮಾರ್, ಖಜಾಂಚಿ ನಾಗರಾಜು.ಎನ್, ವಕೀಲರಾದ ವಿ.ಗೋಪಾಲ್, ಎನ್.ಜಗದೀಶ್, ಸಿ.ವಿ. ಪ್ರಭಾಕರ್, ಲೋಕೇಶ್ ಮತ್ತು ಹರ್ಷಿತಾ.ಡಿ.ಎಂ, ಎಸಿಡಿಪಿಒ ಮೂಕಾಂಬಿಕಾ, ದಾಳಪ್ಪ, ರೇಮಂಡ್ಸ್ ಕಾರ್ಖಾನೆ ವ್ಯವಸ್ಥಾಪಕ ನರಸಪ್ಪ, ಪೋಲಿಸರು ಹಾಗೂ ಕಾರ್ಖಾನೆ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.