ಗೌರಿಬಿದನೂರು ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದ ರೈತ ಗೋಪಿನಾಥ್ ನೆರಳಿನ ಪರದೆಯಲ್ಲಿ ಬೆಳೆದಿರುವ ಕನಕಾoಬರ ಹೂವಿನ ಗಿಡಗಳು.
ಗೌರಿಬಿದನೂರು: ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯಾಗುತ್ತಿರುವಂತೆ ತಾಲ್ಲೂಕಿನ ಕೃಷಿ ಕ್ಷೇತ್ರದಲ್ಲಿಯೂ ಈಚೆಗೆ ಸಾಕಷ್ಟು ಬದಲಾವಣೆ ಕಂಡು ಬಂದಿದೆ. ಸಾಂಪ್ರದಾಯಿಕ ಬೆಳೆಗಳಿಗೆ ಅಂಟಿಕೊಂಡಿರುವ ರೈತರು ನಿಧಾನವಾಗಿ ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.
ತಾಲ್ಲೂಕಿನಲ್ಲಿ ಪುಷ್ಪ ಕೃಷಿ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿ ಹಿಗ್ಗಿಸಿಕೊಳ್ಳುತ್ತಿದೆ. ಪಾರಂಪರಿಕ ಸಂಪ್ರದಾಯಿಕ ಬೆಳೆಗಳ ಜತೆಗೆ ಹೂವಿನ ಬೆಳೆಗಳತ್ತ ರೈತರು ಹೆಚ್ಚು ಅಕರ್ಷಿತರಾಗಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಣ್ಣ ಹಿಡುವಳಿದಾರರು ರೇಷ್ಮೆ, ಬಾಳೆ, ಮಾವು, ದಾಳಿಂಬೆ, ಪಪ್ಪಾಯ, ಜೋಳ, ಶೇಂಗಾ ಮತ್ತಿತರ ಅಧಿಕ ನೀರು, ಶ್ರಮ ಮತ್ತು ಬಂಡವಾಳ ಬೇಡುವ ಬೆಳೆಗಳನ್ನು ಬಿಟ್ಟು ಕಡಿಮೆ ಶ್ರಮದಲ್ಲಿ ಪ್ರತಿದಿನ ಆದಾಯ ತಂದು ಕೊಡುವ ಸುಗಂಧ ರಾಜ ಮತ್ತು ಕನಕಾಂಬರ ಹೂವುಗಳತ್ತ ರೈತರು ಅಕರ್ಷಿತರಾಗುತ್ತಿದ್ದಾರೆ. ಸುಗಂಧರಾಜ ಹೂವು ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಉತ್ಕೃಷ್ಟವಾಗಿ ಬೆಳೆಯಬಹುದು.
ಮಳೆ ಬಂದರೆ ಹೂವುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಜತೆಗೆ ನಿರಂತರವಾಗಿ ಆದಾಯ ಬರುತ್ತದೆ. ಕೆಲವು ಖಾಸಗಿ ಕಂಪನಿಗಳು ಒಪ್ಪಂದ ಮಾಡಿಕೊಂಡು ರೈತರಿಂದ ಖರೀದಿಸುತ್ತಾರೆ. ಇದರಿಂದ ತಾಲ್ಲೂಕಿನಲ್ಲಿ ಸುಗಂಧರಾಜ ರೈತರ ಪ್ರಥಮ ಆಯ್ಕೆಯಾಗಿದೆ.
ಇನ್ನು ಕನಕಾಂಬರ ಬೆಳೆಗೆ ಖರ್ಚು ಹೆಚ್ಚಾಗಿರುತ್ತದೆ ಮತ್ತು ಹೂವು ಬಿಡಿಸುವುದು ಸವಾಲಿನ ಕೆಲಸ. ಆದರೆ, ನಿರಂತರವಾಗಿ ಉತ್ತಮ ಆದಾಯ ಗಳಿಸಬಹುದು. ಹಬ್ಬದ ದಿನಗಳಲ್ಲಿ ಉತ್ತಮ ಬೆಲೆ ಗ್ಯಾರಂಟಿಯಾಗಿ ನಿರೀಕ್ಷೆ ಮಾಡಬಹುದು ಎಂದು ರೈತರು ಹರ್ಷ ವ್ಯಕ್ತಪಡಿಸುತ್ತಾರೆ.
ತಾಲ್ಲೂಕಿನಲ್ಲಿ ಸುಗಂಧರಾಜ 424.21, ಕನಕಾಂಬರ 137.91, ಸೇವಂತಿಗೆ 69.95, ಚೆಂಡು ಹೂವು 56.21, ಗುಲಾಬಿ 20.95, ಮಲ್ಲಿಗೆ 4.7, ಒಟ್ಟು 713.93 ಹೆಕ್ಟರ್ ಜಮೀನಿನಲ್ಲಿ ಹೂವು ಬೆಳೆಯಲಾಗುತ್ತಿದೆ. ಜತೆಗೆ ನೆರಳು ಪರದೆಯಲ್ಲಿ 10.45 ಹೆಕ್ಟೇರ್ನಲ್ಲಿ ಗ್ಲಾಡಿಯೋಲಸ್, ಅಂಥೋರಿಯಂ, ಜೆರ್ಬೇರಾ, ಗುಲಾಬಿ ಸೇರಿದಂತೆ ವಿವಿಧ ಬಗೆ ಅಲಂಕಾರಿಕ ಹೂವು ಬೆಳೆಯಲಾಗುತ್ತಿದೆ.
ಕಾಲಕ್ಕೆ ಅನುಗುಣವಾಗಿ ಹೂವು ಇಳುವರಿಯಲ್ಲಿ ವ್ಯತ್ಯಾಸವಾದರೂ ಸಹ ತಾಲ್ಲೂಕಿನಲ್ಲಿ ಪ್ರತಿದಿನ ಸುಮಾರು ಸುಗಂಧರಾಜ 30 ಟನ್ಗೂ ಹೆಚ್ಚು ಹೂವು ಕೊಯ್ಲು ಮಾಡಲಾಗುತ್ತಿದೆ. ಜತೆಗೆ ಕನಕಾಂಬರ 800 ಕೆ.ಜಿ, ಸೇವಂತಿಗೆ, 500 ಕೆ.ಜಿ, ಮಲ್ಲಿಗೆ 100 ಕೆ.ಜಿ, ಗುಂಡು ಮಲ್ಲಿಗೆ, 100 ಕೆ.ಜಿ ಹೂವು ಮಾರುಕಟ್ಟೆಗೆ ಬರುತ್ತಿದೆ.
ಇಲ್ಲಿ ಬೆಳೆಯಲಾಗುವ ಹೂವು, ಬೆಂಗಳೂರು, ಚಿಕ್ಕಬಳ್ಳಾಪುರ, ಹೈದರಾಬಾದ್, ದೊಡ್ಡಬಳ್ಳಾಪುರ, ಶಿರಾ, ಮಧುಗಿರಿ, ನೆಲಮಂಗಲ, ಪಾವಗಡ ಸೇರಿದಂತೆ ಇನ್ನು ಅನೇಕ ಮಾರುಕಟ್ಟೆಗಳಿಗೆ ರವಾನೆಯಾಗುತ್ತದೆ.
ಉತ್ತಮ ಆದಾಯ
ಪುಷ್ಪ ಕೃಷಿಯಿಂದ ಉತ್ತಮ ಆದಾಯವಿದೆ. ಜತೆಗೆ ತೋಟಗಾರಿಕೆ ಇಲಾಖೆಯಿಂದ ಪುಷ್ಪ ಕೃಷಿ ಮಾಡಲು ಹನಿ ನೀರಾವರಿ, ತುಂತುರು ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡುತ್ತಿರುವುದರಿಂದ ರೈತರು ಹೂವು ಕೃಷಿ ಮಾಡಲು ಉತ್ಸಾಹ ತೋರುತ್ತಿದ್ದಾರೆ.
– ಕಿರಣ್, ತೋಟಗಾರಿಕೆ ಸಹಾಯಕ ನಿರ್ದೇಶಕ, ಗೌರಿಬಿದನೂರು
ರೈತರಿಗೆ ಒಳ್ಳೆಯ ಆಯ್ಕೆ
ಪುಷ್ಪ ಕೃಷಿಯಿಂದ ಜೀವನ ನಿರ್ವಹಣೆ ಸುಲಭವಾಗಿದೆ. ಸುಗಂಧರಾಜ ಹೂವು ಮನೆಯವರೇ ಬಿಡಿಸಿಕೊಳ್ಳಬಹುದು.ಪ್ರತಿದಿನ ಖಚಿತವಾಗಿ ಆದಾಯ ಬರುತ್ತದೆ. ರೈತರಿಗೆ ಸಾಂಪ್ರದಾಯಿಕ ಬೆಳೆಗಳಿಗಿಂತ ಇದು ಉತ್ತಮ ಆಯ್ಕೆ.
– ರವಿ, ಕರೇಕಲ್ಲಹಳ್ಳಿ, ಸುಗಂಧರಾಜ ಬೆಳೆಗಾರ
ಜೀವನ ನಿರ್ವಹಣೆ ಸುಲಭ
ಪ್ರತಿದಿನ ಬೆಳಗ್ಗೆ ಕನಕಾಂಬರ ಹೂವು ಬಿಡಿಸಲು ಕೂಲಿ ಆಳು ಅವಶ್ಯ ಇದೆ. ಇದನ್ನು ಹೊರತುಪಡಿಸಿದರೆ ಖಚಿತವಾಗಿ ಉತ್ತಮ ಆದಾಯ ಗಳಿಸಬಹುದು. ಇದರಿಂದ ಜೀವನ ನಿರ್ವಹಣೆ ಸುಲಭವಾಗಿದೆ. ಪುಷ್ಪ ಕೃಷಿಯಿಂದ ಸಮಯವೂ ಉಳಿಯುತ್ತದೆ.
– ಗೋಪಿನಾಥ್, ಮಾಚೇನಹಳ್ಳಿ ಕನಕಾಂಬರ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.