ADVERTISEMENT

ಗೌರಿಬಿದನೂರು: ಭೂಜಲ ರಕ್ಷಣೆಗೆ ಎಲ್ಲರೂ ಕೈಜೋಡಿಸಿ

ಅಂತರ್ಜಲ ನಿರ್ವಹಣೆಗಾಗಿ ಅಟಲ್ ಭೂಜಲ ಯೋಜನೆ ಅರಿವು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 9:36 IST
Last Updated 25 ಆಗಸ್ಟ್ 2021, 9:36 IST
ಅಟಲ್ ಭೂಜಲ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿದರು
ಅಟಲ್ ಭೂಜಲ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿದರು   

ಗೌರಿಬಿದನೂರು: ನರೇಗಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿನ ಜಲಮೂಲಗಳನ್ನು ಉಳಿಸುವ ಜತೆಗೆ ಅವುಗಳ ಪುನಶ್ಚೇತನಕ್ಕೆ ಎಲ್ಲರೂ ಶ್ರಮಿಸಬೇಕು. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ತಾಲ್ಲೂಕಿನ ತರಿದಾಳು ಗ್ರಾ.ಪಂ ಮಂಗಳವಾರ ಆಯೋಜಿಸಿದ್ದ ಸುಸ್ಥಿರ ‌ಅಂತರ್ಜಲ ನಿರ್ವಹಣೆಗಾಗಿ ಅಟಲ್ ಭೂಜಲ ಯೋಜನೆಯ ಬಗ್ಗೆ ಅರಿವು ಮೂಡಿಸುವ ಗ್ರಾಮ ಸಭೆಯಲ್ಲಿ ಮಾತನಾಡಿದರು.

ನರೇಗಾ ಯೋಜನೆಯು ಹಳ್ಳಿಗಳ ಅಭಿವೃದ್ಧಿಗೆ ಕಾರಣವಾಗುತ್ತಿದೆ. ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಮಾಡುವ ಮೂಲಕ ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗದ ಅವಕಾಶಗಳನ್ನು ‌ಕಲ್ಪಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕು ಎಂದು
ಹೇಳಿದರು.

ADVERTISEMENT

ಪಿಡಿಒ ಬಿ.ಎಚ್.ನಾಗೇಂದ್ರ ಮಾತನಾಡಿ, ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರವು ಸ್ಥಳೀಯರಿಗೆ ಸಾಕಷ್ಟು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದೆ. ನೆಲ, ಜಲ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಮೂಲ ‌ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ‌ಕೂಲಿ ಕಾರ್ಮಿಕರ ಸಹಕಾರದಿಂದ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷ ಡಿ.ಆರ್.ಸಂತೂರಾಮ್ ಮಾತನಾಡಿ, ಅಂತರ್ಜಲದ ವೃದ್ದಿ, ಮಣ್ಣಿನ ಸವಕಳಿ ನಿಯಂತ್ರಣ, ಪರಿಸರ ರಕ್ಷಣೆ ಸೇರಿದಂತೆ ಇನ್ನಿತರ ಕಾರ್ಯಗಳ‌ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಕಾರ್ಯಕ್ಕೆ ನಾವು ‌ಮುಂದಾಗಬೇಕಾಗಿದೆ. ಪಂಚಾಯಿತಿಯಿಂದ ರೈತರು ಮತ್ತು ನಾಗರಿಕರಿಗೆ ಅವಶ್ಯಕವಿರುವ ಸಲಹೆ ಸೂಚನೆಗಳು ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದರು

ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು‌ ಹನುಮಂತರೆಡ್ಡಿ, ಗ್ರಾ.ಪಂ ಉಪಾಧ್ಯಕ್ಷೆ ಶಿವಮ್ಮ, ಅಟಲ್ ಭೂಜಲ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಉಮೇಶ್, ರೇಷ್ಮೆ ಇಲಾಖೆಯ ಕೆಂಚಮಲ್ಲಯ್ಯ, ಗ್ರಾ.ಪಂ ನೋಡಲ್ ಅಧಿಕಾರಿ ಆದಿನಾರಾಯಣಪ್ಪ, ಮುಖಂಡರಾದ ಚಿಕ್ಕಣ್ಣ, ಕರಿಯಣ್ಣ, ಕರವಸೂಲಿಗಾರ ಟಿ.ಎಂ.ನಟರಾಜ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.