ಗುಡಿಬಂಡೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗವಾಯಿ ಅವರು ದಲಿತರು ಎಂಬ ಕಾರಣಕ್ಕೆ ಅವರ ಮೇಲೆ ವಕೀಲ ಶೂ ಎಸೆದಿದ್ದಾನೆ. ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಸಿಪಿಎಂ ಮುಖಂಡ ಮುನಿಸ್ವಾಮಿ ಮಾತನಾಡಿ, ದೇಶದಲ್ಲಿ ದಲಿತರು, ಬಡವರು ಉನ್ನತ ಹುದ್ದೆ ಅಲಂಕರಿಸಿದರೆ ಇವರ ಮನಸು ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಆಗಾಗ ತೋರಿಸುತ್ತಿದ್ದಾರೆ.
ಈ ವಕೀಲನಿಗೆ ದೇಶದ ಸಂವಿಧಾನದ ಮೇಲೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲದ ರೀತಿಯಲ್ಲಿ ವರ್ತಿಸಿಕೊಂಡಿದ್ದಾನೆ. ಇವರ ವಿರುದ್ಧ ಕ್ರಮವಹಿಸಿ ಶಿಕ್ಷೆ ನೀಡಬೇಕು. ಈ ರೀತಿಯ ಕೃತ್ಯಗಳನ್ನು ಸಿಪಿಎಂ ಎಂದಿಗೂ ಸಹಿಸುವುದಿಲ್ಲ. ಈ ಘಟನೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.
ತಹಶೀಲ್ದಾರ್ ಸಿಗ್ಬತ್ವುಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡ ಜಯರಾಮರೆಡ್ಡಿ, ರಾಜು, ಶ್ರೀನಿವಾಸ್, ರಮಣ, ದೇವರಾಜು, ಸೋಮಶೇಖರ್, ಕೊಂಡಪ್ಪ, ರಾಜಪ್ಪ, ಗಂಗರಾಜು ಭಾಗವಹಿಸಿದ್ದರು.