ಗುಡಿಬಂಡೆ: ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಕೆರೆ, ಕುಂಟೆಗಳ ಭರ್ತಿಯಾಗಿದೆ.ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಶೇಖರಣೆಯಾಗಿದೆ. ಕೃಷಿ, ತೋಟಗಾರಿಕೆ ಬೆಳೆ ನಷ್ಟವಾಗಿದ್ದು ರೈತರು ಪರಿಹಾರಕ್ಕಾಗಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ
ಸೆಪ್ಟಂಬರ್ ಎರಡನೇ ವಾರದ ಅಂತ್ಯಕ್ಕೆ ವಾಡಿಕೆ ಮಳೆಗಿಂತ 200 ಪಟ್ಟು ಹೆಚ್ಚು ಮಳೆಯಾಗಿದೆ. ಅಧಿಕ ಮಳೆಯಿಂದ ಕೃಷಿ, ತೋಟಗಾರಿಕೆ ಬೆಳೆ ಜಮೀನಿನಲ್ಲಿ ನೀರು ಶೇಖರಣೆಯಾಗಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಬೆಳೆ ಹಾನಿಯಾದ ಪ್ರದೇಶಕ್ಕೆ ಜಂಟಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಕೆಲಸ ನಡೆಯುತ್ತಿದೆ.
ತೋಟಗಾರಿಕೆ 355 ಹೆಕ್ಟೇರ್ ಪ್ರದೇಶದಲ್ಲಿದ್ದು ಮಳೆಯಿಂದ ಫಸಲಿಗೆ ಬಂದಿರುವ ಟೊಮೆಟೊ 193 ಹೆಕ್ಟೇರ್, ಹೂಕೋಸು 56.40 ಹೆಕ್ಟೇರ್ ಸೇರಿ ತರಕಾರಿ, ಹಣ್ಣು, ಹೂವು, ಕ್ಯಾರೆಟ್, ದ್ರಾಕ್ಷಿ ಬೆಳೆಗಳ 38.14 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ರಾಗಿ, ನೆಲಗಡಲೆ ಬೆಳೆ ಹಾಳಾಗಿದ್ದು ಸುಮಾರು 550 ರೈತರು ನಷ್ಟಕ್ಕೆ
ಒಳಗಾಗಿದ್ದಾರೆ.
ಪಟ್ಟಣದ ಅಮಾನಿಬೈರಸಾಗರ ಕೆರೆ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ 11 ದೊಡ್ಡ ಕೆರೆ, ಜಿ.ಪಂ ಗೆ ಸೇರಿದ 72 ಸಣ್ಣ ಕೆರೆ ಸೇರಿ 83 ಕೆರೆಗಳ ಪೈಕಿ 42 ಕೆರೆ ತುಂಬಿ ಕೋಡಿ ಹರಿಯುತ್ತಿದೆ. ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಸತತ ಮಳೆಯಿಂದ ಹೊಸದಾಗಿ ಕೊರೆದ ಕೊಳವೆ ಬಾವಿಯಲ್ಲಿ ನೀರು ಶೇಖರಣೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.