ಚಿಕ್ಕಬಳ್ಳಾಪುರ: ತಾಲ್ಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡೇನಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಪಂಚಾಯಿತಿಯಿಂದ ಮಂಜೂರಾಗಿರುವ ನಿವೇಶನಗಳಿಗೆ ಹಕ್ಕುಪತ್ರ ನೀಡಿಲ್ಲ. ಪರಿಶಿಷ್ಟರು ವಾಸಿಸುತ್ತಿರುವ ಕಾಲೊನಿಗೆ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸದಸ್ಯರು ಜಡೇನಹಳ್ಳಿಯಲ್ಲಿ ಬುಧವಾರ ಪ್ರತಿಭಟಿಸಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಲೊನಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಪರಿಶಿಷ್ಟರಿಗೆ ಪಂಚಾಯಿತಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥಸ್ವಾಮಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.
ಜಡೇನಹಳ್ಳಿಯಲ್ಲಿ ಪರಿಶಿಷ್ಟರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು. ಪರಿಶಿಷ್ಟ ಬಡ ಕುಟುಂಬಗಳಿಗೆ ಸ್ವಾಧೀನದಲ್ಲಿ ಇರುವ ಹಾಗೂ ಈ ಹಿಂದೆ ಮಾಡಿರುವ ಮನೆಯ ಪಟ್ಟಿ (ಹೌಸ್ಲಿಸ್ಟ್) ಪ್ರಕಾರ ಹಕ್ಕು ಪತ್ರಗಳನ್ನು ನೀಡಬೇಕು. ಪರಿಶಿಷ್ಟ ಕಾಲೊನಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಮಿತಿ ಜಿಲ್ಲಾ ಖಜಾಂಚಿ ಸಾದಲಿ ಮಂಜುನಾಥ ಆಗ್ರಹಿಸಿದರು.
ಗ್ರಾಮದಲ್ಲಿ 30 ವರ್ಷಗಳಿಂದ ಪರಿಶಿಷ್ಟ ಕುಟುಂಬಗಳು ವಾಸಿಸುತ್ತಿವೆ. ಪಿಡಿಒ ಹಾಗೂ ಸದಸ್ಯರು ಶಾಮೀಲಾಗಿ ಇವರಿಗೆ ನಿವೇಶನದ ಹಕ್ಕುಪತ್ರ ನೀಡಿಲ್ಲ. ಬೆದರಿಕೆ ಸೇರಿದಂತೆ
ಅನೇಕ ರೀತಿಯಲ್ಲಿ ಪರಿಶಿಷ್ಟರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಮಿತಿ ಮುಖಂಡರಾದ ಮರಸನಹಳ್ಳಿ ಮುನಿರಾಜು, ವೆಂಕಟರಮಣಪ್ಪ, ಸರಸ್ವತಮ್ಮ, ಮಂಜುಳಾ, ಶಬ್ಬೀರ್, ಅಸ್ಲಂಬಾನು, ಗೀತ, ಶಶಿ ಮತ್ತಿತರರುಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.