ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರದಲ್ಲಿ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಮತ್ತು ಶಾಹ್ ಹ್ಯಾಪಿನೆಸ್ ತುರ್ತು ಆರೈಕೆ ಕೇಂದ್ರವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಲೋಕಾರ್ಪಣೆ ಮಾಡಿದರು.
ಚಿಕ್ಕಬಳ್ಳಾಪುರ: ಭಾಗ್ಯನಗರ (ಬಾಗೇಪಲ್ಲಿ) ಪಟ್ಟಣದ ಡಿವಿಜಿ ರಸ್ತೆಯಲ್ಲಿ ಸೋಮವಾರ (ಸೆ.1) ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಮತ್ತು ಶಾಹ್ ಹ್ಯಾಪಿನೆಸ್ ತುರ್ತು ಆರೈಕೆ ಕೇಂದ್ರವನ್ನು 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಸೇವಾ ಅಭಿಯಾನ'ದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಲೋಕಾರ್ಪಣೆ ಮಾಡಿದರು.
ಎಲ್ಲ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡುವ ಈ ಕೇಂದ್ರವು ರೋಗ ನಿರ್ಣಯ (ಡಯಾಗ್ನಸ್ಟಿಕ್) ಮತ್ತು ಔಷಧಾಲಯವನ್ನೂ ಹೊಂದಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿರುವ ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಥಮಿಕ ಆರೋಗ್ಯ ಸೇವಾ ವಿಸ್ತರಣೆಯಾಗಿ ಈ ಕೇಂದ್ರವು ಕಾರ್ಯನಿರ್ವಹಿಸಲಿದೆ.
ಸ್ವಾಸ್ಥ್ಯ ಕ್ಷೇಮ ಕೇಂದ್ರ ಲೋಕಾರ್ಪಣೆ ಮಾಡಿ ಮಾತನಾಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, 'ಭಾರತದ ಮೊದಲ ತುರ್ತು ಆರೈಕೆ ಕೇಂದ್ರವನ್ನು ಭಾಗ್ಯನಗರದಲ್ಲಿ ಆರಂಭಿಸಿದ್ದೇವೆ. ಇದು ಎಮರ್ಜೆನ್ಸಿ ಮತ್ತು ಸಾಮಾನ್ಯ ಓಪಿಡಿ ಸೇವೆಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸಲಿದೆ. ಇಲ್ಲಿ ರೋಗಪತ್ತೆಯಾದವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ನಮ್ಮದೇ ಆಂಬುಲೆನ್ಸ್ಗಳಲ್ಲಿ ಮುದ್ದೇನಹಳ್ಳಿಗೆ ಕರೆದೊಯ್ದು ಅಗತ್ಯ ಸೇವೆ ಒದಗಿಸುತ್ತೇವೆ. ಈ ಭಾಗದ ಸುಮಾರು 2 ಲಕ್ಷ ಜನರಿಗೆ ಸ್ವಾಸ್ಥ್ಯ ಕೇಂದ್ರದಿಂದ ಅನುಕೂಲವಾಗಲಿದೆ' ಎಂದು ವಿವರಿಸಿದರು.
ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈವರೆಗೆ ಸುಮಾರು 10 ಲಕ್ಷ ಜನರಿಗೆ ಉಚಿತ ಚಿಕಿತ್ಸೆ ಕೊಟ್ಟಿದೆ. 30 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಾಗಿವೆ. 6 ಸಾವಿರಕ್ಕೂ ಹೆಚ್ಚು ಮಕ್ಕಳು ಹುಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಹುಟ್ಟಿದ ಮೊದಲ ಮಗು 'ಸಾಯಿಶ್ರೀ' ಇಲ್ಲಿಯೇ ಇದ್ದಾರೆ ಎಂದು ಮಗುವನ್ನು ಎಲ್ಲರಿಗೂ ಪರಿಚಯಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎನ್ನುವ ನಮ್ಮ ಆಶಯಕ್ಕೆ ಅಮೆರಿಕದ ಶಾಹ್ ಹ್ಯಾಪಿನೆಸ್ ಫೌಂಡೇಶನ್ ಸಹ ಕೈಜೋಡಿಸಿದೆ. ಇಂಥ ಒಟ್ಟು 20 ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಿಸಲು ಫೌಂಡೇಶನ್ ಸಂಕಲ್ಪ ಮಾಡಿದೆ. ಎಲ್ಲ ಕೇಂದ್ರಗಳೂ ಗ್ರಾಮೀಣ ಪ್ರದೇಶಗಳಲ್ಲಿಯೇ ಕಾರ್ಯನಿರ್ವಹಿಸಲಿವೆ.
ಸತ್ಯ ಸಾಯಿ ಬಾಬಾ ಅವರ 100 ನೇ ಜನ್ಮದಿನೋತ್ಸವದ ವಿಶೇಷ ಕಾರ್ಯಕ್ರಮಗಳು ಮುದ್ದೇನಹಳ್ಳಿಯಲ್ಲಿ ನಡೆಯುತ್ತಿವೆ. 600 ಬೆಡ್ ಸಾಮರ್ಥ್ಯದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹ ಸಿದ್ಧವಾಗುತ್ತಿದೆ. ಇದೇ ನವೆಂಬರ್ನಲ್ಲಿ ಆಸ್ಪತ್ರೆಯ ಉದ್ಘಾಟನೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಎಂಎಸ್ಐ ಸರ್ವೀಸಸ್ನ ಅಧ್ಯಕ್ಷರಾದ ಜೀವನ್ ಭಟ್, ಸಾಮಾಜಿಕ ಪರಿಣಾಮ ವಿಭಾಗದ ಸಹಾಯಕ ಮುಸಾಬ್ ಆಲಂ, ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಕಾರ್ಯತಂತ್ರದ ಬೆಳವಣಿಗೆ ಮತ್ತು ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ ಸತೀಶ್ ಬಾಬು, ಶ್ರೀ ಸತ್ಯ ಸಾಯಿ ಶಿಕ್ಷಣ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.