ADVERTISEMENT

ಗೌರಿಬಿದನೂರು: ಅಕ್ರಮ ಗರ್ಭಪಾತ, ನಕಲಿ ಕ್ಲಿನಿಕ್ ಮಾಹಿತಿ ನೀಡಿದರೆ ಲಕ್ಷ ಇನಾಮು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:14 IST
Last Updated 23 ಸೆಪ್ಟೆಂಬರ್ 2025, 4:14 IST
ಗೌರಿಬಿದನೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಸಿಇಒ ನವೀನ್ ಭಟ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಗೌರಿಬಿದನೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಸಿಇಒ ನವೀನ್ ಭಟ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಗೌರಿಬಿದನೂರು: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಟ್ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ, ಸಮರ್ಪಕ ಔಷಧಗಳ ವಿತರಣೆ, ಸ್ವಚ್ಛತೆ ಹಾಗೂ ಲಂಚ ಸ್ವೀಕಾರದ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ, ಆಸ್ಪತ್ರೆಯ ಕುರಿತು ವೈದ್ಯಾಧಿಕಾರಿಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ನಂತರ ಮಾತನಾಡಿ, ತಾಲ್ಲೂಕಿನಲ್ಲಿ ಅನಧಿಕೃತವಾಗಿ ಗರ್ಭಪಾತ ಮಾಡುವುದು ಹಾಗೂ ಯಾವುದೇ ಪರವಾನಗಿ ಇಲ್ಲದೆ ನಕಲಿ ಕ್ಲಿನಿಕ್‌ ನಡೆಸುವುದು ಕಂಡುಬಂದರೆ, ನಮ್ಮ ಗಮನಕ್ಕೆ ತರಬೇಕು. ಹೀಗಾದಲ್ಲಿ, ಕುಟುಕು ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಜೊತೆಗೆ ತಪ್ಪಿತಸ್ಥರಿಗೆ ದಂಡ ಮತ್ತು ಶಿಕ್ಷೆ ವಿಧಿಸಬಹುದು. ಈ ಕುರಿತು ಮಾಹಿತಿ ನೀಡಿದವರಿಗೆ ಸರ್ಕಾರದಿಂದ ₹1 ಲಕ್ಷ ಇನಾಮು ನೀಡಲಾಗುವುದು. ಜೊತೆಗೆ ಭದ್ರತಾ ಹಿತದೃಷ್ಟಿಯಿಂದ ಅಂಥವರ ಹೆಸರನ್ನು ಗೋಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ADVERTISEMENT

ಆಸ್ಪತ್ರೆಯ ಹೆರಿಗೆ ವಾರ್ಡ್‌ಗಳಲ್ಲಿ ಹೆರಿಗೆ ಮಾಡಿಸಲು ವೈದ್ಯರು ಲಂಚ ಕೇಳುವರೇ ಎಂಬುದಾಗಿ, ಬಾಣಂತನಕ್ಕೆ ಬಂದ ತಾಯಂದಿರನ್ನು ವಿಚಾರಿಸಲಾಯಿತು. ಆಗ, ಬಾಣಂತಿಯರು ಪ್ರತಿಕ್ರಿಯಿಸಿ, ವೈದ್ಯರು ಲಂಚ ಕೇಳಿಲ್ಲ ಎಂದಿದ್ದಾರೆ. ಇತ್ತೀಚೆಗೆ ರಕ್ತದ ಅದಲು–ಬದಲು ಗೊಂದಲದಿಂದ ಬಾಣಂತಿ ಭಾಗ್ಯಮ್ಮ ಮೃತಪಟ್ಟಿದ್ದರು. ಸರ್ಕಾರದ ಮಾನದಂಡ ಮತ್ತು ತಾಲ್ಲೂಕಿನಲ್ಲಿ ಬೇಕಾದ ರಕ್ತದ ಅವಶ್ಯಕತೆಯನ್ನು ಅನುಸರಿಸಿ, ರಕ್ತದ ಬ್ಯಾಂಕ್ ಆರಂಭಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. 6 ತಿಂಗಳಿನಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ಆರಂಭವಾಗಲಿದೆ. ಆಗ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮೇಲಿನ ಒತ್ತಡವು ಕಡಿಮೆಯಾಗಲಿದೆ ಎಂದರು. 

ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ. ಹೊನ್ನಯ್ಯ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಲಕ್ಷ್ಮಿಕಾಂತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.