ಚಿಂತಾಮಣಿ: ತಾಲ್ಲೂಕಿನ ಕಡದಲಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮಕಲಹಳ್ಳಿ, ಹನುಮಯ್ಯಗಾರಹಳ್ಳಿ ಗ್ರಾಮದ ಸುತ್ತಲಿನ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಕೋನಕುಂಟ್ಲು 2ನೇ ಬೀಟ್ನ ಬಿಲ್ಲಾಂಡ್ಲಹಳ್ಳಿ ಸರ್ವೆ ನಂ 65 ಮತ್ತು 58ರ 25ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಸಸಿಗಳಿಗೆ ನೆಡುವ ನೀಲಗಿರಿ ಗಿಡ ಕಡಿಯಲು ಟೆಂಡರ್ ಪಡೆದಿರುವ ಗುತ್ತಿಗೆದಾರರು ಅಕ್ರಮವಾಗಿ ದೊಡ್ಡ ಮರಗಳನ್ನು ಕಡಿಯುತ್ತಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಆರೋಪಿಸಿದ್ದಾರೆ.
ಬಿಲ್ಲಾಂಡ್ಲಹಳ್ಳಿ 25 ಹೆಕ್ಟೇರ್ ಮತ್ತು ಚೀಮಲಗುಟ್ಟ ಸರ್ವೆ ನಂ.20 ಮತ್ತು 29ರಲ್ಲಿ 25 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಸುಮಾರು 4-5 ಎಂ.ಎಂ ವ್ಯಾಸದ (ದಪ್ಪದ) ಗಿಡಗಳನ್ನು ಕಡಿದುಕೊಳ್ಳಲು ₹1.09 ಲಕ್ಷ ಟೆಂಡರ್ ಪಡೆದಿದ್ದಾರೆ. ಟೆಂಟರ್ ಬಗ್ಗೆಯೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಗೊತ್ತಾಗದಂತೆ ರಹಸ್ಯವಾಗಿ ಟೆಂಡರ್
ನೀಡಲಾಗಿದೆ. ಟೆಂಡರ್ ನೀತಿ ನಿಯಮ ಗಾಳಿಗೆ ತೂರಿ ದೊಡ್ಡ ಮರಗಳನ್ನು ರಾತ್ರೋರಾತ್ರಿ ಕಟಾವ್ ಮಾಡಿ ಸಾಗಿಸಿದ್ದಾರೆ ಎಂದು ಸಂಘದ ಮುಂಗಾನಹಳ್ಳಿ ಹೋಬಳಿ ಅಧ್ಯಕ್ಷ ಎಸ್.ವೆಂಕಟರೆಡ್ಡಿ
ಆರೋಪಿಸಿದರು.
ಟೊಮೆಟೊ ಗಿಡಗಳಿಗೆ ನೆಡುವ ಸಣ್ಣ ಮರ ಮಾತ್ರ ಕಡಿಯಲು ಟೆಂಡರ್ ನೀಡಲಾಗಿದೆ. ಆರಂಭದಲ್ಲಿ ಅದೇ ರೀತಿ ಸಣ್ಣ ಮರಗಳನ್ನು ಮಾತ್ರ ಕಡಿದಿದ್ದಾರೆ. ನಂತರ ರಾತ್ರೋರಾತ್ರಿ ಕದ್ದುಮುಚ್ಚಿ ದೊಡ್ಡ ಮರಗಳನ್ನು ಕಡಿದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿಕುಳಿತಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಸರ್ಕಾರಕ್ಕೆ ಆಗಿರುವ ನಷ್ಟ ವಸೂಲಿ ಮಾಡಬೇಕು. ಇಲ್ಲದಿದ್ದರೆ ಸಂಘಟನೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಘಟಕಗಳ ಗಮನಕ್ಕೆ ತಂದು ತೀವ್ರ ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ
ಎಂದರು.
ಹನುಮಯ್ಯಗಾರಹಳ್ಳಿ ಶಿವಾರೆಡ್ಡಿ, ಅಶೋಕ್, ಸುನಪಗುಟ್ಟ ರಘುನಾಥ್ ರೆಡ್ಡಿ, ಡಿ.ಎಸ್.ಎಸ್ ನ ಸಿ.ಕೆನಾಗರಾಜ್, ಪ್ರಕಾಶ್ ರೆಡ್ಡಿ, ಶಂಕರ್ ರೆಡ್ಡಿ, ಜಯಣ್ಣ, ಸೋಮಕಲಹಳ್ಳಿ ಶಿವರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.