
ಗುಡಿಬಂಡೆ: ತಾಲ್ಲೂಕಿನ ಕಂತಾರ್ಲಹಳ್ಳಿ ಸರ್ವೆ ನಂಬರ್ 25 ಎರಡು ಎಕರೆ ಜಮೀನಿನಲ್ಲಿ ವ್ಯಕ್ತಿಯೊಬ್ಬರು ಕಲ್ಲು ಗಣಿ ನಡೆಸುತ್ತಿದ್ದಾರೆ. ಈ ಗಣಿ ಕಾನೂನುಬಾಹಿರವಾಗಿ ಮಿತಿಮೀರಿದ ಬ್ಲಾಸ್ಟಿಂಗ್ ಮಾಡುತ್ತಿದೆ. ತ್ಯಾಜ್ಯ ವಸ್ತುಗಳನ್ನು ರಸ್ತೆ ಪಕ್ಕದ ಸರ್ಕಾರಿ ಜಾಗದಲ್ಲಿ ಹಾಕಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಈ ಬಗ್ಗೆ ಸಾರ್ವಜನಿಕರು ತಹಶೀಲ್ದಾರರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತಹಶೀಲ್ದಾರರು ಗಣಿ ಮಾಲೀಕರಿಗೆ ನೋಟಿಸ್ ನೀಡಿದರು. ಇದಕ್ಕೆ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕಾನೂನು ಬಾಹಿರ ಕಾರ್ಯ ಮುಂದುವರಿಸಿದ್ದರು.
ಈ ಪರಿಸ್ಥಿತಿ ಪರಿಶೀಲಿಸಿದ ತಹಶೀಲ್ದಾರರು ಸಿಗ್ಬತ್ವುಲ್ಲಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ. ಕಲ್ಲು ಗಣಿಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಬ್ಲಾಸ್ಟಿಂಗ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಕೋರಿದ್ದಾರೆ.
ದಪ್ಪರ್ತಿ, ಭತ್ತಲಹಳ್ಳಿ, ಹನುಮಂತಪುರ ಮುಂತಾದ ಸಮೀಪದ ಗ್ರಾಮಗಳ ಜನರಿಗೂ ಈ ಗಣಿಯಿಂದ ತೊಂದರೆಯಾಗುತ್ತಿದೆ. ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರ ತೊಂದರೆಗಳನ್ನು ದಾಖಲಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಾದ ಪದ್ಮಜಾ.ಎಂ.ವಿ ಮಾತನಾಡಿ, ದೂರು ಬಂದಿದ್ದರೆ ಅದನ್ನು ಪರಿಶೀಲನೆ ಮಾಡಿ ಕ್ರಮ ಜರುಗಿಸಲಾಗುವುದು. ಯಾವುದೇ ಕಾರಣಕ್ಕೂ ತಡ ಮಾಡುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.