ಚೇಳೂರು: ತಾಲ್ಲೂಕಿನಲ್ಲಿ ಉತ್ತಮ ಮಳೆ ಯಾಗುತ್ತಿರುವುದರಿಂದ ಬೆಳೆಗೆ ಸ್ಪರ್ಧೆಯೆಂಬಂತೆ ಕಳೆಯೂ ಬೆಳೆಯುತ್ತಿದೆ. ಹಾಗಾಗಿ ಕಳೆ ಕೀಳಲು ಕೃಷಿ ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ.
ಕೊರೊನಾ ದಿಂದಾಗಿ ನಗರಗಳಿಂದ ಹಳ್ಳಿಗಳಿಗೆ ವಾಪಾಸ್ಸಾದ ಬಹುತೇಕ ಕುಟುಂಬಗಳು ಪಾಳು ಬಿಟ್ಟಿದ್ದ ಜಮೀನಿನಲ್ಲಿ ಮತ್ತೆ ಬಿತ್ತನೆ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಬಹುತೇಕ ಈಗಾಗಲೇ ಬಿತ್ತನೆ ಕಾರ್ಯ ಪೂರ್ಣ
ಗೊಂಡಿದೆ. ಸದ್ಯ ಬೆಳೆ ನಿರ್ವಹಣೆ ಸವಾಲಾಗಿದೆ.
ನಿತ್ಯ ಬೆಳಿಗ್ಗೆ ಗ್ರಾಮಗಳಲ್ಲಿ ಕೂಲಿಕಾರ್ಮಿಕರನ್ನು ಕರೆದೊಯ್ಯಲು ಆಟೊಗಳು ಬಂದು ನಿಲ್ಲುತ್ತವೆ. ಆದಾಗ್ಯೂ ಕೃಷಿ ಕಾರ್ಮಿಕರು ಸಿಗುವುದು ದುಸ್ತರವಾಗಿದೆ. ಕೆಲ ತಿಂಗಳುಗಳ ಹಿಂದೆ ಒಬ್ಬರನ್ನು ಕರೆದರೆ ಮೂರು, ನಾಲ್ಕು ಜನರು ಕೂಲಿಗೆ ತೆರಳಲು ಸಿದ್ಧರಾಗುತ್ತಿದ್ದರು. ಆದರೆ ಈಗ ಎಲ್ಲರೂ ಅವರಿಗಿರುವ ಚಿಕ್ಕ ಪ್ರಮಾಣದ ಜಮೀನನ್ನೆ ಹಸನು ಮಾಡುವಲ್ಲಿ ಆಸಕ್ತರಾಗಿದ್ದಾರೆ.
‘ಅನೇಕ ವರ್ಷಗಳಿಂದ ಶೇಂಗಾ ಬೆಳೆಯುತ್ತಿದ್ದೇವೆ. ಪ್ರತಿ ವರ್ಷ ಬೆಳೆಗೆ ನೀರಿಲ್ಲದೆ ಟ್ರಾಕ್ಟರ್ ಮೂಲಕ ನೀರು ಪೂರೈಸುತ್ತಿದ್ದವು. ಆದರೆ ಈ ಬಾರಿ ಮಳೆ ಬರುತ್ತಿರುವುದರಿಂದ ಕಳೆಯೂ ಹೆಚ್ಚಾಗಿದೆ. ಕಳೆನಾಶಕ ಸಿಂಪಡಿಸಿದರೆ ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ ಕೃಷಿ ಕಾರ್ಮಿಕರನ್ನೇ ಅವಲಂಬಿಸಬೇಕಿದೆ’ ಎಂದು ಜ್ಯೋತಿ ನಗರದ ಜೆ.ಎನ್. ವೆಂಕಟರವಣಪ್ಪ ಹೇಳಿದರು.
‘ಈ ಹಿಂದೆ ನಮ್ಮೂರಿನಲ್ಲಿ ದಿನಕ್ಕೆ ₹ 150 ಕೂಲಿ ನೀಡುತ್ತಿದ್ದರು. ಆದರೆ ಈ ಬಾರಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದ್ದು, ₹ 300 ಕೂಲಿ ನೀಡುತ್ತಿದ್ದಾರೆ. ಪಕ್ಕದ ಊರಿನ ಹೊಲಗಳಿಗೆ ಹೋದರೆ ₹ 350 ಕೂಲಿ ಸಿಗುತ್ತದೆ’ ಎನ್ನುತ್ತಾರೆ ಕೃಷಿ ಕಾರ್ಮಿಕ ಮಹಿಳೆ ಬೆಲ್ಲಾಲಂಪಲ್ಲಿ ಶಂಕರಮ್ಮ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.