ADVERTISEMENT

ಗೌರಿಬಿದನೂರು | ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಖಾನೆ ತ್ಯಾಜ್ಯ: ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:07 IST
Last Updated 19 ಸೆಪ್ಟೆಂಬರ್ 2025, 5:07 IST
   

ಗೌರಿಬಿದನೂರು: ತಾಲ್ಲೂಕಿನ ಹಲವು ಕಡೆಗಳಲ್ಲಿ ರಾಸಾಯನಿಕ ತ್ಯಾಜ್ಯ ಸುರಿದು ಪರಿಸರ ಮತ್ತು ಜನರ ನೆಮ್ಮದಿ ಹಾಳು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಪ್ರಜಾ ಸಂಘರ್ಷ ಸಮಿತಿಯು ತಹಶೀಲ್ದಾರ್ ಮತ್ತು ಗ್ರಾಮಾಂತರ ಠಾಣೆ ಪೊಲೀಸರಿಗೆ ಗುರುವಾರ ಮನವಿ ಸಲ್ಲಿಸಿದವು. 

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ನಗರ ಮತ್ತು ಗ್ರಾಮೀಣ ಭಾಗದ ಹಲವು ಪ್ರದೇಶದಲ್ಲಿ ಕಾರ್ಖಾನೆಗಳು ಹಲವು ತಿಂಗಳುಗಳಿಂದ ರಾತ್ರಿ ವೇಳೆ ರಾಸಾಯನಿಕ ತ್ಯಾಜ್ಯ ಸುರಿಯುತ್ತಿವೆ. ಬುಧವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 69ರ ಪಕ್ಕದಲ್ಲಿರುವ ಅಂಡರ್ ಪಾಸ್ ಚರಂಡಿ, ಹೊಸೂರಿನ ಡಾ.ಎಚ್. ಎನ್ ಅಂತರರಾಷ್ಟ್ರೀಯ ಉಪಕೇಂದ್ರದ ಸುತ್ತಮುತ್ತಲೂ ಕಾರ್ಖಾನೆಗಳ ತ್ಯಾಜ್ಯವನ್ನು ತಂದು ಸುರಿಯಲಾಗಿದೆ ಎಂದು ಆರೋಪಿಸಿದರು. 

ಮಳೆ ಬಂದಾಗ, ತ್ಯಾಜ್ಯವು ನದಿ ಮತ್ತು ನಾಲೆಗಳಿಗೆ ಸೇರುತ್ತಿದ್ದು, ಮೀನುಗಳು ಮೃತಪಡುತ್ತಿವೆ. ಇದೇ ನೀರು ಕುಡಿಯುತ್ತಿರುವ ದನ, ಕರು ಮತ್ತು ಜಾನುವಾರುಗಳಿಗೆ ಗಂಭೀರ ಕಾಯಿಲೆ ಬರುತ್ತಿದೆ. ರಾಸಾಯನಿಕಗಳು ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಸೇರುತ್ತಿದ್ದು, ಈ ಭಾಗದ ಹಲವು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ದೂರಿದರು. 

ADVERTISEMENT

ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ವಿಲೇವಾರಿ ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ಹಿಂದೆ ಚಿಕ್ಕಬಳ್ಳಾಪುರ ಪರಿಸರ ಮಾಲಿನ್ಯ ನಿಯಂತ್ರಣಕ್ಕೂ ದೂರು ನೀಡಲಾಗಿತ್ತು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆರ್.ಎನ್. ರಾಜು ಮಾತನಾಡಿ, ಹೊಸೂರಿನ ರಂಗನಹಳ್ಳಿ ಬಳಿಯ ಅರಣ್ಯ ಪ್ರದೇಶ ಹಾಗೂ ರಾಷ್ಟೀಯ ಹೆದ್ದಾರಿ 69 ರಲ್ಲಿ ಹಲವು ತಿಂಗಳುಗಳಿಂದ ಕಾರ್ಖಾನೆ ರಾಸಾಯನಿಕ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಸುರಿಯಲಾಗುತ್ತಿದೆ. ಪಕ್ಕದಲ್ಲಿರುವ ಪರಿಸರಕ್ಕೆ ಹಾನಿಯಾಗುತ್ತಿದ್ದು, ಪ್ರಾಣಿ ಪಕ್ಷಿಗಳು ಸಾಯುತ್ತಿವೆ. ಈ ಭಾಗದ ಕೊಳವೆ ಬಾವಿಗಳ ನೀರು ಕುಡಿದು ಹಲವರಿಗೆ ಗಂಟಲು ಬೇನೆ ಸೇರಿದಂತೆ ಇನ್ನಿತರ ಕಾಯಿಲೆಗಳು ವ್ಯಾಪಿಸುತ್ತಿವೆ ಎಂದು ತಿಳಿಸಿದರು. ಈ ವೇಳೆ ಮುದ್ದುಗಂಗಪ್ಪ, ರಾಮಚಂದ್ರರೆಡ್ಡಿ, ಬಿ.ಆರ್.ಸನತ್ ಕುಮಾರ್, ಎಚ್.ಎಸ್. ಲಕ್ಷ್ಮಿನಾರಾಯಣ, ಜಿ. ರಾಜಣ್ಣ, ದಿನೇಶ್ ಕುಮಾರ್, ಚಂದ್ರಶೇಖರ್, ನರಸಿಂಹ ಮೂರ್ತಿ ಹಾಜರಿದ್ದರು.

ರಾಷ್ಟೀಯ ಹೆದ್ದಾರಿ 69ರ ಬದಿ ಸುರಿಯಲಾಗಿರುವ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.