ADVERTISEMENT

ಚಿಕ್ಕಬಳ್ಳಾಪುರ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 3:26 IST
Last Updated 17 ಮಾರ್ಚ್ 2021, 3:26 IST
ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು
ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು   

ಚಿಕ್ಕಬಳ್ಳಾಪುರ: ‘ಆತ್ಮಸ್ಥೈರ್ಯ, ಪ್ರಗತಿಯ ಸಾಧನೆಯತ್ತ ಗಮನಹರಿಸಬೇಕಾದರೆ ನಾವೆಲ್ಲರೂ ಹೆಣ್ಣಿಗೆ ಗೌರವ ಕೊಡುವ ಜತೆಗೆ ಪ್ರೇರಣೆ ನೀಡಬೇಕಿದೆ’ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಮಹಿಳೆಯರು ನಿರಂತರವಾಗಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ದಿನದಿಂದ ದಿನಕ್ಕೆ ದೇಶಕ್ಕೆ ಅಭಿವೃದ್ಧಿಯ ಕೊಡುಗೆ ನೀಡುತ್ತಿದ್ದಾರೆ. ಇನ್ನಷ್ಟೂ ಪ್ರೇರಣೆ ಹಾಗೂ ಸಹಕಾರ ದೊರೆತಿದ್ದೆ ಆದಲ್ಲಿ, ಇನ್ನೂ ಉನ್ನತ ಮಟ್ಟದ ಸಾಧನೆ ಮಾಡುವರು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ಮಾತನಾಡಿ, ‘ಹೆಣ್ಣಿನ ಮೇಲೆ ಹಿಂದಿನ ಕಾಲದಲ್ಲಿ ನಡೆಯುತ್ತಿದ್ದಂತಹ ಶೋಷಣೆ, ದೌರ್ಜನ್ಯ, ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಮಹಿಳೆಯರು ಸಾಧನೆಯ ಹಾದಿ ತುಳಿಯುವುದು ಸೂಕ್ತ’ ಎಂದು ಹೇಳಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮಾತನಾಡಿ, ‘ಅನಾದಿ ಕಾಲದಿಂದಲೂ ಸೂಚಿಸಿರುವಂತೆ ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪಾತ್ರ ಮತ್ತು ಸಾಧನೆ ಅಪಾರವಾಗಿದೆ. ಕ್ಷೇತ್ರವಾರು ಸಮಿಕ್ಷೆ ಪ್ರಕಾರ ಪರಿಗಣಿಸುವುದಾದರೇ ದೇಶ-ವಿದೇಶಗಳಲ್ಲಿ ಮಿಲಿಟರಿ, ಪೈಲಟ್, ಡ್ರೈವರ್ ಹೀಗೆ ಎಲ್ಲಾ ವೃತ್ತಿಗಳಲ್ಲಿ ಮಹಿಳೆಯ ಪ್ರಗತಿ ಸಾಧನೆಯತ್ತಾ ಮುನ್ನುಗ್ಗುತ್ತಾ ಇದ್ದಾರೆ. ಮಹಿಳೆಯರ ಸಾಧನೆ, ಸಂಕಲ್ಪ ಮತ್ತು ಗುರಿ ಎಲ್ಲದಕ್ಕೂ ಮಿಗಿಲಾದದ್ದು’ ಎಂದು‌ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕಾ ಮಾತನಾಡಿ, ‘ಗಂಡು-ಹೆಣ್ಣು ಇಬ್ಬರೂ ಸಮಾನರೇ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿಬರುವಂತೆ ಸಾಧನೆ ಅಗತ್ಯ ಇದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ಮಾತನಾಡಿ, ‘ಹೆಣ್ಣು ಮಕ್ಕಳು ಸಾಧನೆ ಮಾಡುವ ಜೊತೆಗೆ ಆರೋಗ್ಯದ ಬಗ್ಗೆಯೂ ಸಹ ಗಮನಹರಿಸಬೇಕು. ಗರ್ಭಕೋಶ, ಸ್ತನಕೋಶದ ಬಗ್ಗೆ ಜಿಲ್ಲೆಯಾದ್ಯಂತ ಆರೋಗ್ಯ ಶಿಬಿರವನ್ನು ಮಾಡಲು ಸಜ್ಜಾಗಿದೆ’ ಎಂದರು.

ಆಹಾರ ಇಲಾಖೆಯ ಉಪನಿರ್ದೇಶಕರಾದ ಸವಿತಾ ಮಾತನಾಡಿ, ‘ಜಿಲ್ಲೆಯಲ್ಲಿ ಶೇ 50ರಿಂದ 60ರಷ್ಟು ಫಲಿತಾಂಶ ಪಡೆದ ಯಾವುದಾದರೂ ಸರ್ಕಾರಿ ಶಾಲೆಯನ್ನು ಶೇ 70 ರಿಂದ 80 ಫಲಿತಾಂಶ ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಮುಂದಾಗಿದ್ದಾರೆ. ಪರಿಣಿತ ಹೊಂದಿರುವ ವಿಷಯ ಕುರಿತು ಮಕ್ಕಳಿಗೆ ಪಾಠ ಮಾಡಲಿದ್ದಾರೆ’ ಎಂದು ಘೋಷಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ವಿ.ಕಮಲಮ್ಮ, ಕವಿತಾ ಕೃಷ್ಣಮೂರ್ತಿ, ತನುಜಾರಘು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಣುಕಾ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರೂಪ, ಮೀನುಗಾರಿಕೆ ಇಲಾಖೆಯ ಜಿಲ್ಲಾ ಅಧಿಕಾರಿ ಯಶಸ್ವಿನಿ, ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ವರಲಕ್ಷ್ಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.