
ಬಾಗೇಪಲ್ಲಿ: ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ವತಿಯಿಂದ ರಾಜ್ಯೋತ್ಸವ ಹಾಗೂ ಭಾಗ್ಯನಗರ ಮರುನಾಮಕರಣಕ್ಕೆ ಶ್ರಮಿಸಿದವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಗುಡಿಬಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್ ಮಾತನಾಡಿ, ಕಾಸರಗೋಡು, ಬೆಳಗಾವಿ ಸೇರಿದಂತೆ ಗಡಿ ಹಾಗೂ ಬೆಂಗಳೂರು ನಗರ ಪ್ರದೇಶದಲ್ಲಿ ಕರವೇ ಹೋರಾಟದಿಂದ ಕನ್ನಡ ಭಾಷೆ ಉಳಿದಿದೆ. ಕರವೇ ಹೋರಾಟದಿಂದ ಕಾವೇರಿ ನದಿ ನೀರು ಹಂಚಿಕೆ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ ಎಂದರು.
ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ, ಗಡಿ ತಾಲ್ಲೂಕಿನಲ್ಲಿ ಚಿತ್ರಾವತಿ ನೀರು ಮತ್ತು ಭಾಗ್ಯನಗರ ನಾಮಕರಣಕ್ಕಾಗಿ 20 ವರ್ಷಗಳಿಂದ ಕರವೇ ಹೋರಾಟ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರದಿಂದ ಆಂಧ್ರಪ್ರದೇಶದ ಪುಟ್ಟಪರ್ತಿಗೆ ರೈಲು ಯೋಜನೆ, ಕೈಗಾರಿಕಾ ಯೋಜನೆ ಜಾರಿಗಾಗಿ ಹೋರಾಟ ಮಾಡಲಾಗುವುದು ಎಂದರು.
ರಸಮಂಜರಿ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ಪಂಜುರ್ಲಿ ವೇಷದ ನೃತ್ಯವು ಜನರ ಮನಸೂರೆಗೊಂಡಿತು. ಕನ್ನಡ ಗೀತೆಗಳ, ಭರತನಾಟ್ಯವು ಕಣ್ಮನ ಸೆಳೆಯಿತು. ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಎಂ.ಶ್ರೀನಿವಾಸ್, ಆರ್.ಹನುಮಂತರೆಡ್ಡಿ, ಡಿ.ಎನ್.ಕೃಷ್ಣಾರೆಡ್ಡಿ, ಎ.ನಂಜುಂಡಪ್ಪ, ಎಂ.ಆರ್.ಲೋಕೇಶ್, ಸುಜಾತಮ್ಮ, ಬಿ.ಎ.ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.