ಚಿಂತಾಮಣಿ: ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಹಲವಾರು ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಸದಾ ಬರಗಾಲದಿಂದ ತತ್ತರಿಸುತ್ತಿದ್ದ ಬಯಲುಸೀಮೆಯ ಜನರು ಕೆರೆಗಳು ಒಂದೊಂದಾಗಿ ಕೋಡಿ ಹರಿಯುತ್ತಿರುವುದನ್ನು ಕಂಡು ಕುಣಿದು ಕುಪ್ಪಳಿಸುತ್ತಿದ್ದಾರೆ.
ತಾಲ್ಲೂಕಿನ ಸೋಮವಾರ ರಾತ್ರಿ ಸುರಿದ ಮಳೆಗೆ ಕೋಟಗಲ್ ಕೆರೆಯು ಹಲವಾರು ವರ್ಷಗಳ ನಂತರ ಮೈದುಂಬಿ ಕೋಡಿ ಹರಿದಿದ್ದರಿಂದ ಸಂತಸಗೊಂಡ ಗ್ರಾಮಸ್ಥರು ಮಂಗಳವಾರ ವಿಶೇಷ ಪೂಜೆ ಹಾಗೂ ಬಾಗಿನ ಸಲ್ಲಿಸಿ ಕೋಡಿಯ ನೀರಿನಲ್ಲಿ ಮಿಂದೆದ್ದರು.
ತಾಲ್ಲೂಕಿನಲ್ಲಿ ದಶಕದ ನಂತರ ಒಳ್ಳೆಯ ಮಳೆಯಾಗುತ್ತಿದೆ. ನೀರನ್ನೇ ಕಾಣದಿದ್ದ ಜನರು ಕೆರೆ, ಕುಂಟೆ, ಹಳ್ಳಕೊಳ್ಳಗಳಲ್ಲಿ ನೀರನ್ನು ಕಂಡು ಪುಳಕಿತಗೊಳ್ಳುತ್ತಿದ್ದಾರೆ. ಅಂಬಾಜಿದುರ್ಗ ಹೋಬಳಿಯ ಮಸಿಲಹಳ್ಳಿ, ಅನಕಲ್, ಕೋಟಗಲ್, ಕೆ.ರಾಗುಟ್ಟಹಳ್ಳಿ, ಮಿಂಡಿಗಲ್
ಮತ್ತಿತರ ಕೆರೆಗಳು ತುಂಬಿ ಕೋಡಿ ಹರಿಯುತ್ತವೆ. ಈ ವರ್ಷ ಮುಂಗಾರಿನ ಆರಂಭದಿಂದಲೂ ಹದವಾದ ಮಳೆಯಾಗುತ್ತಿದ್ದು ಬೆಳೆಗಳು ಸಹ ಉತ್ತಮವಾಗಿದ್ದು ನಳನಳಿಸುತ್ತಿವೆ. ರೈತ ಮೊಗದಲ್ಲೂ ಸಂತಸ ಎದ್ದು ಕಾಣುತ್ತಿದೆ.
ತುಂಬಿ ಹರಿಯುತ್ತಿರುವ ಕೆರೆಗಳಿಗೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಹಾಗೂ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವು ಕಡೆ ಮಳೆಯಿಮದ ಸಣ್ಣ-ಪುಟ್ಟ ತೊಂದರೆಗಳು ಆಗಿದೆ.
ನಗರದ ಮುರುಗಮಲ್ಲ ರಸ್ತೆಯ ಕರಿಯಪ್ಪಲ್ಲಿ ಗ್ರಾಮದ ಬಳಿ ನಗರಸಭೆಯ ಮಾಜಿ ಸದಸ್ಯ ಶ್ರೀರಾಮಪ್ಪ ₹12 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಕೋಳಿ ಫಾರಂ ಶೆಡ್ ಮಂಗಳವಾರ ಬೆಳಗಿನಜಾವ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ನೆಲಕಚ್ಚಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.