ಚಿಕ್ಕಬಳ್ಳಾಪುರ: ಶ್ರೀಕೃಷ್ಣ ಜನ್ಮಾಷ್ಟಮಿಯ ದಿನವಾದ ಭಾನುವಾರ ನಗರದ ತುಂಬೆಲ್ಲ ‘ದೇವಕಿಸುತ’ನ ಸ್ತುತಿ ಕೇಳಿಬಂತು. ಬೆಳಿಗ್ಗೆ ‘ವೇಣುಗೋಪಾಲ’ನ ವೇಷಧರಿಸಿ ಶಾಲೆಗಳಿಗೆ ತೆರಳಲು ಗಲ್ಲಿಗಲ್ಲಿಗಳಿಂದ ಹೊರಬಿದ್ದ ಚಿಣ್ಣರು ಗಮನ ಸೆಳೆದರು.
ನವಿಲುಗರಿಯ ಮುಕುಟ ಧರಿಸಿ, ಕೊರಳಲ್ಲಿ ಬಗೆ ಬಗೆಯ ಮಾಲೆಗಳನ್ನು ಧರಿಸಿ, ಕೈಯಲ್ಲಿ ಕೊಳಲು ಹಿಡಿದು ಸಾಗುತ್ತಿದ್ದ ಪುಟಾಣಿಗಳನ್ನು ಜನರು ಹಸನ್ಮುಖದಿಂದಲೇ ದಿಟ್ಟಿಸುತ್ತಿದ್ದರು. ಕೆಲ ಶಾಲೆಗಳಲ್ಲಂತೂ ಹಿಡಿಗಟ್ಟಿದಂತೆ ಕಂಡುಬಂದ ರಾಧಾ–ಕೃಷ್ಣರ ಜೋಡಿಗಳು ನಂದಗೋಪಾಲನ ಜನ್ಮಾಷ್ಟಮಿಗೆ ಮೆರುಗು ಹೆಚ್ಚಿಸಿದ್ದವು.
ನಗರದ ಎಂ.ಜಿ.ರಸ್ತೆಯಲ್ಲಿರುವ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಅಭಿಷೇಕ, ಧಾರ್ಮಿಕ ಕೈಂಕರ್ಯಗಳು ನಡೆದವು. ಅಲಂಕೃತ ರಥದಲ್ಲಿ ಕೃಷ್ಣನ ಪ್ರತಿಮೆ ಇಟ್ಟು ಮೆರವಣಿಗೆ ಮೆರವಣಿಗೆ ಮಾಡಲಾಯಿತು. ಯಾದವ ಸಮುದಾಯದ ಜನರು ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಶ್ರೀಕೃಷ್ಣನ ಆದರ್ಶಗಳು ದಾರಿದೀಪ
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಗೇಟ್ನಲ್ಲಿರುವ ಸಾಯಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ಶ್ರೀಕೃಷ್ಣ ಜಯಂತೋತ್ಸವ ಅಂಗವಾಗಿ ಮಕ್ಕಳಿಗೆ ಕೃಷ್ಣನ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎಂ.ಮಂಜುನಾಥ್, ‘ಸತ್ಯ, ಧರ್ಮ, ಶಾಂತಿಗೆ ಪ್ರತಿರೂಪವಾಗಿರುವ ಶ್ರೀಕೃಷ್ಣನ ಸಂದೇಶ ಸರ್ವಕಾಲಿಕವಾಗಿದ್ದು, ಸಮಸಮಾಜದ ನಿರ್ಮಾಣಕ್ಕೆ ಶ್ರೀಕೃಷ್ಣನ ಆದರ್ಶಗಳು ದಾರಿದೀಪವಾಗಿವೆ’ ಎಂದು ಹೇಳಿದರು.
‘ಹಿಂದೂ ಧರ್ಮದಲ್ಲಿ ಕೃಷ್ಣನ ಪಾತ್ರ ಅಪಾರ ಹಾಗೂ ಅತ್ಯಂತ ಮಹತ್ವಪೂರ್ಣವಾಗಿದೆ. ದುಷ್ಟರ ಶಿಕ್ಷಕ, ಶಿಷ್ಟರ ರಕ್ಷಕನಾಗಿರುವ ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಪ್ರಪಂಚಕ್ಕೆ ಜೀವನ ಸಂದೇಶ ಸಾರಿದ್ದಾನೆ. ಪೋಷಕರು ಮಕ್ಕಳಿಗೆ ಆತನ ಉಪದೇಶಗಳನ್ನು ನಿತ್ಯವೂ ಬೋಧಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಶಾಲೆಯಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಶ್ರೀಕೃಷ್ಣನ ವೇಷಭೂಷಣಗಳನ್ನು ಧರಿಸಿ ಸಂಭ್ರಮಿಸಿದರು.
ಮುಖಂಡರಾದ ಶಿವರಾಮರೆಡ್ಡಿ, ಮುನಿಶಾಮಿಗೌಡ, ಶಿಕ್ಷಕರಾದ ವಿನುತಾ, ಮೀನಾಕ್ಷಿ ಮಾಲಾಶ್ರೀ, ಧನ್ಯ, ರೂಪಶ್ರೀ ಮಮತಾ, ಶೈಲಜಾ, ನೇತ್ರಾವತಿ, ಶ್ರೀನಿವಾಸ್, ಗಜೇಂದ್ರ, ಸೌಮ್ಯ, ಸುಮಿತ್ರ, ಮಂಜುಳಾ, ಲಲಿತಶ್ರೀ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.