ಚಿಕ್ಕಬಳ್ಳಾಪುರ:ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಪಾಧ್ಯಕ್ಷರನ್ನಾಗಿ ಬಲಿಜ ಸಮುದಾಯದ ಮುಖಂಡ ಹಾಗೂ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಅವರನ್ನು ಸರ್ಕಾರ ನೇಮಕ ಮಾಡಿದೆ.
ನವೀನ್ ಕಿರಣ್ ಅವರು ಸಚಿವ ಡಾ.ಕೆ.ಸುಧಾಕರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಚುನಾವಣೆಗೆ ಇನ್ನೇನು ಕೆಲವು ತಿಂಗಳು ಬಾಕಿ ಇದೆ. ಇಂತಹ ಸಮಯದಲ್ಲಿ ಬಲಿಜ ಸಮುದಾಯದ ಮತದಾರರನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಈ ನೇಮಕ ಮಾಡಿದೆ ಎನ್ನಲಾಗುತ್ತಿದೆ.
ಅಂದು ಎದುರಾಳಿ ಇಂದು ಆಪ್ತ: ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ ನವೀನ್ ಕಿರಣ್ 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಧಾಕರ್ ವಿರುದ್ಧ ಸ್ಪರ್ಧೆ ಮಾಡಿದ್ದರು. ಉಪಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚಿಸಿದ್ದರು. ಈ ಎರಡೂ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಂತರ ದಿನಗಳಲ್ಲಿ ಸುಧಾಕರ್ ಅವರ ಜತೆ ನವೀನ್ ಕಿರಣ್ ಕೈ ಜೋಡಿಸಿದರು. ಇದು ಕ್ಷೇತ್ರದಲ್ಲಿ ತೀವ್ರ ರಾಜಕೀಯ ಚರ್ಚೆಗೂ ಕಾರಣವಾಗಿತ್ತು.
ನಗರಸಭೆಯು ಸುಪರ್ದಿಗೆ ಪಡೆದಿದ್ದ ಪಂಚಗಿರಿ ಬೋಧನಾ ಶಾಲೆ ಸಹ ನವೀನ್ ಕಿರಣ್ ನೇತೃತ್ವದ ಪಂಚಗಿರಿ ಶಿಕ್ಷಣ ಸಂಸ್ಥೆಗೆ ಮರು ಸೇರ್ಪಡೆ ಆಯಿತು. ಈಗ ನವೀನ್ ಕಿರಣ್ ಅವರಿಗೆಬಿಎಂಟಿಸಿ ಉಪಾಧ್ಯಕ್ಷ ಹುದ್ದೆ ನೀಡಲಾಗಿದೆ.
‘25 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಇದ್ದೇನೆ. ನನ್ನ ಗುರುತಿಸಿ ಈ ಅವಕಾಶ ನೀಡಿದ್ದಾರೆ. ಇದಕ್ಕೆತುಂಬಾ ಸಂತೋಷವಾಗುತ್ತಿದೆ’ ಎಂದು ಕೆ.ವಿ.ನವೀನ್ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಾಲಪ್ಪ ಅವರು ಸೇರಿದಂತೆ ಎಲ್ಲರ ಒಡನಾಟದಲ್ಲಿ ಇದ್ದೆ. ಆದರೆ ಈ ಮಟ್ಟಕ್ಕೆ ನಮ್ಮನ್ನು ಯಾರೂ ಗುರುತಿಸಿರಲಿಲ್ಲ. ಜನರಿಗೆ ಅನುಕೂಲ ಮಾಡಿಕೊಡುವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.