ADVERTISEMENT

ಕೈವಾರದಲ್ಲಿ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 2:37 IST
Last Updated 2 ಡಿಸೆಂಬರ್ 2020, 2:37 IST
ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರು ಮುಖ್ಯದೀಪ ಹಚ್ಚಿದರು
ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರು ಮುಖ್ಯದೀಪ ಹಚ್ಚಿದರು   

ಚಿಂತಾಮಣಿ: ತಾಲ್ಲೂಕಿನ ಕೈವಾರದಲ್ಲಿ ಕಾರ್ತೀಕ ಮಾಸದ ಹುಣ್ಣಿಮೆಯಂದು ಸೋಮವಾರ ರಾತ್ರಿ ಲಕ್ಷ ದೀಪೋತ್ಸವ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಗ್ರಾಮದ ಭೀಮಲಿಂಗೇಶ್ವರಸ್ವಾಮಿ ದೇವಾಲಯದ ಒಳಗಡೆ ಹಾಗೂ ಆವರಣ ಲಕ್ಷ ದೀಪಗಳಿಂದ ಜಗಮಗಿಸುತ್ತಿತ್ತು. ನೂರಾರು ಮಹಿಳೆಯರು ಉತ್ಸಾಹದಿಂದ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.

ಬೆಳಿಗ್ಗೆಯಿಂದಲೇ ದೂರ ದೂರದ ಊರುಗಳಿಂದ ಬಂದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಣ್ಣು ಕಾಯಿ ನೀಡಿ ಪೂಜೆ ಮಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭೀಮ ಲಿಂಗೇಶ್ವರ ಸ್ವಾಮಿಗೆ ಮಹನ್ಯಾಸಪೂರ್ವಕ ರುದ್ರಾಭಿ ಷೇಕ ನಡೆಯಿತು. ರುದ್ರಹೋಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಪಾರ್ವತಿ ಅಮ್ಮನವರಿಗೂ ವಿಶೇಷ ಅಭಿಷೇಕ, ಸಹಸ್ರನಾಮಾರ್ಚನೆಯನ್ನು ಮಾಡಲಾಯಿತು. ಲಿಂಗಕ್ಕೆ ಹೂಗಳಿಂದ ಮಾಡಿದ್ದ ವಿಶೇಷ ಅಲಂಕಾರ ಭಕ್ತರ ಮನತಣಿಸಿತು.

ADVERTISEMENT

ಪಾಂಡವರು ಅರಗಿನಮನೆಯಿಂದ ತಪ್ಪಿಸಿಕೊಂಡು ಬಂದು ಅಂದಿನ ಏಕ ಚಕ್ರಪುರ ಕೈವಾರದಲ್ಲಿ ಬ್ರಾಹ್ಮಣರೊಬ್ಬರ ಮನೆಯಲ್ಲಿ ವಾಸವಾಗಿದ್ದರು. ಗ್ರಾಮಕ್ಕೆ ಕಂಟಕವಾಗಿದ್ದ ಬಕಾಸುರನನ್ನು ಭೀಮ ಸಂಹಾರ ಮಾಡಿದ. ಪಾಪ ಪರಿಹಾರಕ್ಕಾಗಿ ಭೀಮ ಭೀಮಲಿಂಗೇಶ್ವರ ಲಿಂಗವನ್ನು ಪ್ರತಿಷ್ಠಾಪಿಸಿದ. ನಂತರ ಎಲ್ಲ ಪಾಂಡವರು ಒಂದೊಂದು ಲಿಂಗವನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಸ್ಥಳ ಪುರಾಣದಿಂದ ತಿಳಿದುಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.