ಚಿಕ್ಕಬಳ್ಳಾಪುರ: ‘ಗೋಹತ್ಯೆ ಮತ್ತು ಗೋಮಾಂಸ ಸೇವನೆ ಮಹಾ ಪಾಪದ ಕೆಲಸ. ರಾಕ್ಷಸ ಗುಣ ಹೊಂದಿರುವವರು ಮಾತ್ರ ಗೋಮಾಂಸ ಸೇವಿಸಲು ಸಾಧ್ಯ. ಗೋಹತ್ಯೆ ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಅವರಿಗೆ ಒತ್ತಾಯಿಸುತ್ತೇನೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮನುಷ್ಯರಾದವರು, ಭಾರತೀಯ ಸಂಪ್ರದಾಯದ ಬಗ್ಗೆ ಗೌರವ, ನಂಬಿಕೆ ಹೊಂದಿರುವವರು ಗೋವುಗಳನ್ನು ಗೌರವಿಸುತ್ತಾರೆ. ಗೋಹತ್ಯೆ ನಿಷೇಧದ ವಿಚಾರದಲ್ಲಿ ಬಿಜೆಪಿ ದೃಢ ಸಂಕಲ್ಪ ಹೊಂದಿದೆ. ಆದಷ್ಟು ಶೀಘ್ರದಲ್ಲಿ ಗೋಮಾಂಸ ರಫ್ತು ನಿಷೇಧ ಕಾಯ್ದೆ ಜಾರಿಗೆ ಬರುವುದರಲ್ಲಿ ಅನುಮಾನವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಆಗಿರುವ ಮಾತುಕತೆ ಅನ್ವಯ ಭರವಸೆ ಈಡೇರಿಸುವುದು ಹೈಕಮಾಂಡ್ ಧರ್ಮ. ಆ ಮಾತಿನಂತೆ ಪಕ್ಷ ಇದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಂದ ಬಿಜೆಪಿ ಬಂದವರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಪಕ್ಷ ಮಾಡಲಿದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.
‘ಆರ್ಥಿಕ ದುಸ್ಥಿತಿಯ ಇಂತಹ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಶಿಸ್ತು, ಪ್ರಗತಿ ಮುಂದುವರಿಯಬೇಕಾದರೆ ಕೇಂದ್ರ ಸರ್ಕಾರ ನಮ್ಮ ಪಾಲಿನ ಜಿಎಸ್ಟಿ ಹಣವನ್ನು ನಮಗೆ ನೀಡಬೇಕಿದೆ. ಜಿಎಸ್ಟಿ ಖೋತಾ ಆದರೆ ಕಷ್ಟ ಆಗಲಿದೆ. ಮುಖ್ಯಮಂತ್ರಿ, ಗೃಹಸಚಿವರ ನಿಯೋಗ ಕೇಂದ್ರದಿಂದ ಹಣ ತರುವ ವಿಶ್ವಾಸವಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.