ತುರುವೇಕೆರೆ: ಸೈನಿಕ, ಶಿಕ್ಷಕ, ರೈತ ಇವರ ಅನುಪಮ ಸೇವೆಯಿಂದ ದೇಶ ಕಟ್ಟಲು ಸಾಧ್ಯ ಎಂದು ಶಾಸಕ ಮಸಾಲ ಜಯರಾಂ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದ ಆವರಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಅಮೃತಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯ ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯವನ್ನು ಗಳಿಸಿಕೊಂಡಿದ್ದೇವೆ. ಗಾಂಧಿ, ಪಟೇಲ್, ನೇತಾಜಿ, ಅಂಬೇಡ್ಕರ್, ತಿಲಕ್ರಂತಹ ಮಹಾ ಪುರುಷರು ಮುಂದಾಳತ್ವ ವಹಿಸಿ ಸ್ವಾತಂತ್ರ್ಯ ದೊರಕಿಸಿ ಬ್ರಿಟಿಷರಿಂದ ಮುಕ್ತಿಗೊಳಿಸಿದ್ದಾರೆ ಎಂದರು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ನಂಬಿಕೆ ಇಟ್ಟು ಮುಂದೆ ಸಾಗೋಣ. ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಸರ್ವ ಜನಾಂಗವೂ ಒಂದಾಗಿ ಬಾಳಿ ದೇಶವನ್ನು ಸಧೃಢಗೊಳಿಸಬೇಕು. ದಶಕಗಳು ಕಳೆದರೂ ದೇಶವು ಹಿಂಸೆ, ಭ್ರಷ್ಟಾಚಾರ, ಬಡತನ, ಭಯೋತ್ಪಾದನೆ, ನಿರುದ್ಯೋಗದಂತಹ ಸಮಸ್ಯೆಗಳಿಂದ ಮುಕ್ತಗೊಂಡಿಲ್ಲ. ನಾವೆಲ್ಲ ಒಗ್ಗೂಡಿ ಭಾರತ ನಿರ್ಮಿಸೋಣಎಂದರು.
ಪ್ರೊ.ಕೆ.ಪುಟ್ಟರಂಗಪ್ಪ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಇದಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾರತಾಂಬೆಯ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಪ್ರಕೃತಿ ವಿಕೋಪದಿಂದ ಹಲವರ ಪ್ರಾಣ ರಕ್ಷಿಸಿದ ಗಂಗಾಧರ್, ಮೋಹನ್, ಕಿರಣ್, ಆನಂದ್ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಹೆಚ್ಚು ಅಂಕ ಪಡೆದ ಜೈನಾಬ್, ದುಂಬಿಶ್ರೀ, ಸಿಂಚನ, ನರೇಶ್ಗೌಡ, ಸೃಜನ್, ಕೆಂಪೇಗೌಡ, ಅನುರಾಧ, ಮಣಿಕಂಠ ಇವರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾರಾಜಶೇಖರ್, ಉಪಾಧ್ಯಕ್ಷೆ ಶೀಲಾ, ಇ.ಒ. ಸತೀಶ್ಕುಮಾರ್, ಬಿ.ಇ.ಒ. ಎಸ್.ಕೆ. ಪದ್ಮನಾಭ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಸಿ.ಪಿ.ಐ ಗೋಪಾಲ್ನಾಯಕ್, ಪಿ.ಎಸ್.ಐ. ಕೇಶವಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜುಮುನಿಯೂರು, ಚಿದಾನಂದ್, ವಿ.ಟಿ.ವೆಂಕಟರಾಮ್, ಡಿ.ಪಿ. ರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.