ಶಿಡ್ಲಘಟ್ಟ: ನಗರದ ಟೋಲ್ಗೇಟ್ ಬಳಿ ಹಾದು ಹೋಗಿರುವ ರಾಜಕಾಲುವೆಗೆ ಸಿಮೆಂಟ್ ತಡೆಗೋಡೆ ನಿರ್ಮಿಸುವುದಕ್ಕಾಗಿ ಕಾಲುವೆಯಲ್ಲಿನ ತ್ಯಾಜ್ಯ ತೆಗೆದು ಕಾಲುವೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಾಜಕಾಲುವೆ ಆಸುಪಾಸಿನ ನಿವಾಸಿಗಳು ಸಂಚರಿಸಲು ಅನುಕೂಲ ಆಗುವಂತೆ ಮೋರಿ ನಿರ್ಮಿಸಿಕೊಡಲು ಆಗ್ರಹಿಸಿದರು.
ಟೋಲ್ಗೇಟ್ ಬಳಿ ರಾಜಕಾಲುವೆಯ ಒಂದು ಬದಿ ಎಂಟತ್ತು ಮನೆಗಳಿದ್ದು ಅಲ್ಲಿರುವ ಕಲ್ಲು ಚಪ್ಪಡಿಗಳಿಂದ ನಿರ್ಮಿಸಿದ್ದ ಮೋರಿಯ ಮೇಲೆ ಅಲ್ಲಿನವರು ಓಡಾಡುತ್ತಿದ್ದರು. ಆದರೆ ರಾಜಕಾಲುವೆ ಅಗಲೀಕರಣ ಮತ್ತು ಹೂಳು ಮಣ್ಣು ತೆಗೆಯುವಾಗ ಅದನ್ನು ತೆಗೆದು ಹಾಕಲಾಗುತ್ತದೆ. ಇದರಿಂದ ಆತಂಕಗೊಂಡ ಸ್ಥಳೀಯರು ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ಮನವಿ ಸಲ್ಲಿಸಿದರು. ಪೌರಾಯುಕ್ತ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರ ಅಹವಾಲು ಆಲಿಸಿದರು.
ಸ್ಥಳೀಯ ನಿವಾಸಿ ವೆಂಕಟೇಶ್ ಮಾತನಾಡಿ, ರಾಜಕಾಲುವೆ ಪಕ್ಕ ಜಮೀನುಗಳಿದ್ದು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ. ನಗರಸಭೆಯವರೆ ನಿರ್ಮಿಸಿಕೊಟ್ಟಿದ್ದ ಕಲ್ಲು ಚಪ್ಪಡಿಗಳ ಮೋರಿ ಮೇಲೆ ಓಡಾಡುತ್ತಿದ್ದೇವೆ. ಇದೀಗ ರಾಜಕಾಲುವೆಗೆ ಸಿಮೆಂಟ್ ತಡೆಗೋಡೆ ನಿರ್ಮಿಸಲು ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿದೆ. ಕಲ್ಲು ಚಪ್ಪಡಿಗಳ ಮೋರಿ ತೆಗೆದು ಹಾಕಿದ ಮೇಲೆ ಮತ್ತೆ ಮೋರಿ ನಿರ್ಮಿಸುವುದಿಲ್ಲ ಎಂದು ವಾರ್ಡ್ ಸದಸ್ಯ ರಾಘವೇಂದ್ರ ಹೇಳಿದ್ದಾರೆ. ಮೋರಿ ನಿರ್ಮಿಸಿಲ್ಲವಾದರೆ ನಾವು ಓಡಾಡುವುದು ಹೇಗೆ? ದನಕರುಗಳಿಗೆ ಮೇವು ಸಾಗಿಸುವುದು ಹೇಗೆ? ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು.
ನಮಗೆ ಮೋರಿ ನಿರ್ಮಿಸಿ ಓಡಾಡಲು ಅನುಕೂಲ ಮಾಡಿಕೊಡುವುದಾದರೆ ಮಾತ್ರ ಈಗಿರುವ ಕಲ್ಲು ಚಪ್ಪಡಿ ಮೋರಿ ಕಿತ್ತು ಹೂಳು ತ್ಯಾಜ್ಯ ತೆಗೆಯಲು ಬಿಡುತ್ತೇವೆ ಇಲ್ಲವಾದರೆ ಬಿಡುವುದಿಲ್ಲ ಎಂದರು.
ಪೌರಾಯುಕ್ತೆ ಜಿ.ಅಮೃತ ಪ್ರತಿಕ್ರಿಯಿಸಿ, ಈ ಜಮೀನುಗಳು ನಗರಸಭೆಗೆ ಸೇರಿಲ್ಲ. ನೀವು ಕಟ್ಟಿರುವ ಮನೆ ನಗರಸಭೆ ವ್ಯಾಪ್ತಿಗೂ ಬರುವುದಿಲ್ಲ. ರಾಜಕಾಲುವೆ ಮೇಲೆ ಮೋರಿ ನಿರ್ಮಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ನಮಗೂ ಅಧಿಕಾರವಿಲ್ಲ. ಬೇಕಾದರೆ ಮನವಿ ಕೊಡಿ ನಾವು ಜಿಲ್ಲಾಧಿಕಾರಿಗೆ ಬರೆಯುತ್ತೇವೆ ಎಂದರು.
ಇದರಿಂದ ಕುಪಿತಗೊಂಡ ವೆಂಕಟೇಶ್ ಮತ್ತು ಇನ್ನಿತರೆ ಸ್ಥಳೀಯರು ಈ ರಾಜಕಾಲುವೆ ಇಡೀ ನಗರದಲ್ಲಿ ಸುಮಾರು 2-3 ಕಿ.ಮೀ ದೂರ ಹಾದು ಹೋಗಿದೆ. ಅಲ್ಲೆಲ್ಲಾ ಮೋರಿ ಹೇಗೆ ನಿರ್ಮಿಸಿದ್ದೀರಿ, ರಾಜಕಾಲುವೆ ಮೇಲೆ ಮನೆ ಅಂಗಡಿ ಕಾಂಪ್ಲೆಕ್ಸ್ ಕಟ್ಟಿದ್ದರೂ ಅವುಗಳಿಗೆ ಅನುಮತಿ ಹೇಗೆ ಕೊಟ್ಟಿದ್ದೀರಿ. ಶ್ರೀಮಂತರಿಗೆ ಒಂದು ಬಡವರಿಗೆ ಒಂದು ನ್ಯಾಯವೇ ಎಂದು ವಾಗ್ವಾದಕ್ಕೆ ಇಳಿದರು.
ಈ ಬಗ್ಗೆ ನಗರೋತ್ಥಾನ ಯೋಜನೆಯ ಎಂಜಿನಿಯರ್ ಹಾಗೂ ಪಿಡಿ ಗಮನಕ್ಕೆ ತರುತ್ತೇನೆ. ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಅದುವರೆಗೂ ಕೆಲಸಕ್ಕೆ ಅಡ್ಡಿಪಡಿಸಬೇಡಿ ಎಂದು ಪೌರಾಯುಕ್ತೆ ಸ್ಥಳೀಯರಿಗೆ ತಿಳಿಸಿ ತೆರಳಿದರು.
ನಗರಸಭೆ ಕಂದಾಯ ಅಧಿಕಾರಿ ನಾಗರಾಜ್, ಜೆಇ ಚಕ್ರಪಾಣಿ, ದೇವರಾಜ್, ಭರತ್, ಪಿಳ್ಳಪ್ಪ, ಶ್ರೀನಿವಾಸ್, ನಾಗರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.