ಚಿಂತಾಮಣಿ: ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಆದೇಶದಂತೆ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಡಿ. 19ರಂದು ನಗರದಲ್ಲಿ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ನಗರದ ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ. ರಾಜೇಂದ್ರಕುಮಾರ್ ತಿಳಿಸಿದರು.
ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್ನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅದಾಲತ್ನಲ್ಲಿ ರಾಜೀ ಸಂಧಾನದ ಮೂಲಕ ಮೊಕದ್ದಮೆ ಇತ್ಯರ್ಥಪಡಿಸಿಕೊಂಡರೆ ನ್ಯಾಯಾಲಯಕ್ಕೆ ಅಲೆದಾಡುವ ಸಮಯ, ಶ್ರಮ, ಖರ್ಚು ಉಳಿತಾಯವಾಗುತ್ತದೆ. ಸೌಹಾರ್ದ ಸಂಬಂಧವೂ ಉಳಿಯುತ್ತದೆ. ಸಣ್ಣಪುಟ್ಟ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ನ್ಯಾಯಾಲಯಗಳ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ ಎಂದು ಹೇಳಿದರು.
ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳು, ಸಂಘ–ಸಂಸ್ಥೆಗಳು ಲೋಕ ಅದಾಲತ್ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಹಿರಿಯ ವಕೀಲರು ಸಂಧಾನಕಾರರಾಗಿರುತ್ತಾರೆ. ಅಗತ್ಯವಾದ ಸಲಹೆ, ಸೂಚನೆ, ಮಾರ್ಗದರ್ಶನ ನೀಡುತ್ತಾರೆ. ರಾಜೀ ಮೂಲಕ ಇತ್ಯರ್ಥಪಡಿಸಿಕೊಂಡರೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.
ಅದಾಲತ್ನಲ್ಲಿ ಬೆಸ್ಕಾಂ, ಬಿಎಸ್ಎಲ್ಎನ್, ಸಾರಿಗೆ ಮತ್ತಿತರ ಸಂಸ್ಥೆಗಳಲ್ಲಿ ಹಣ ಪಾವತಿ ಮಾಡದವರಿಗೆ ಹಾಗೂ ದೂರುದಾರರಿಗೆ ಅದಾಲತ್ನಲ್ಲಿ ಭಾಗವಹಿಸುವಂತೆ ನೋಟಿಸ್ ನೀಡಬೇಕು. ಬ್ಯಾಂಕ್ಗಳು ಸಾಲ ಪಾವತಿ ಬಗ್ಗೆ ಹಾಗೂ ತಕರಾರುದಾರರಿಗೂ ಅದಾಲತ್ನಲ್ಲಿ ಭಾಗವಹಿಸುವ ಬಗ್ಗೆ ನೋಟಿಸ್ ನೀಡಬೇಕು ಎಂದು ಸೂಚಿಸಿದರು.
2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಚ್.ಎಸ್. ಮಂಜುನಾಥ್, ಸಿವಿಲ್ ನ್ಯಾಯಾಧೀಶ ಜಿ.ಜೆ. ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಸ್. ರಾಜಾರಾಂ, ಉಪಾಧ್ಯಕ್ಷ ಶಿವಾನಂದ, ವಕೀಲರು ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.