ಚಿಂತಾಮಣಿ: ಮಾದಿಗ ಜನಾಂಗಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕು ಎಂದು ಮಾದಿಗ ದಂಡೋರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ.ರಾಮಪ್ಪ ಒತ್ತಾಯಿಸಿದರು.
ಮಾದಿಗ ದಂಡೋರದ 26ನೇ ಸಂಸ್ಥಾಪಕ ದಿನಾಚರಣೆಯ ಅಂಗವಾಗಿ ತಾಲ್ಲೂಕಿನ ಊಲವಾಡಿ ಮತ್ತು ಮೂಡಲಚಿಂತಲಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತ್ಯಂತ ಹಿಂದುಳಿದ ಮಾದಿಗ ಜನಾಂಗದ ಅಭಿವೃದ್ಧಿಗೆ ಸರ್ಕಾರಗಳು ಸಹಕರಿಸುತ್ತಿಲ್ಲ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದೇವೆ. ಮಾದಿಗ ಜನಾಂಗ ಸರ್ಕಾರದ ಮುಖ್ಯವಾಹಿನಿಗೆ ಬರಲು ಸದಾಶಿವ ಆಯೋಗದ ವರದಿಯ ಅನುಸಾರ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಬೇಕು ಹಾಗೂ ಹೆಚ್ಚಿನ ಅನುದಾನ ನೀಡಬೇಕು. ಮಾದಿಗ ಸಮುದಾಯದವರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಪಡೆದು ಉನ್ನತ ಸ್ಥಾನಮಾನ ಪಡೆಯಬೇಕು. ಜನಾಂಗದಲ್ಲಿ ಉಳ್ಳವರು ಬಡ ಕುಟುಂಬಗಳಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ಪಿ.ಎಂ.ನರಸಿಂಹಯ್ಯ, ಮಾಡಿಕೆರೆ ಎಂ.ಎನ್.ನಾರಾಯಣಸ್ವಾಮಿ, ಸೂಲದೇನಹಳ್ಳಿ ಮುನಿವೆಂಕಟರಾಯಪ್ಪ, ಪೀಜಾರಿ ನರಸಿಂಹಯ್ಯ, ನರಸಿಂಹಪ್ಪ, ಕೆ.ಎಂ.ನರಸಿಂಹಪ್ಪ, ಮೂರ್ತಿ, ಸೋಮಶೇಖರ್, ವೆಕಟರಾಯಪ್ಪ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.