ADVERTISEMENT

ಬಾಗೇಪಲ್ಲಿ: ಮುಖ್ಯರಸ್ತೆ ಪ್ರಯಾಣ, ಜನರಿಗೆ ಪ್ರಯಾಸಕರ

ನಿತ್ಯ ಸಂಚಾರ ಕಿರಿಕಿರಿ– ಪಾದಾಚಾರಿ ಮಾರ್ಗದಲ್ಲಿಯೇ ವಾಹನ ನಿಲುಗಡೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 8:04 IST
Last Updated 19 ಜೂನ್ 2020, 8:04 IST
ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿಯೇ ಅಡ್ಡಾದಿಡ್ಡಿಯಾಗಿ ವಾಹನ ನಿಂತಿವೆ
ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿಯೇ ಅಡ್ಡಾದಿಡ್ಡಿಯಾಗಿ ವಾಹನ ನಿಂತಿವೆ   

ಬಾಗೇಪಲ್ಲಿ: ನಿತ್ಯ ಸಂಚಾರ ದಟ್ಟಣೆಯ ಕಿರಿಕಿರಿ. ಎಲ್ಲೆಂದರಲ್ಲಿ ವಾಹನ ನಿಲುಗಡೆ. ಅಡ್ಡಾದಿಡ್ಡಿ ಸಂಚಾರ, ಪಾದಚಾರಿ ಮಾರ್ಗದಲ್ಲಿಯೇ ಕೈಗಾಡಿ... ಹೀಗೆ ಹತ್ತಾರು ಸಮಸ್ಯೆಗಳ ಸರಮಾಲೆ ಹೊತ್ತಿರುವ ಪಟ್ಟಣದ ಮುಖ್ಯರಸ್ತೆಯ ಪ್ರಯಾಣ ಪ್ರಯಾಸದಾಯಕವಾಗಿದೆ.

ನಿರಂತರವಾಗಿ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದ್ದರೂ, ಸಂಚಾರಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕು ಪಂಚಾಯಿತಿ ಕಚೇರಿ ಮುಂದಿರುವ ತಿರುವಿನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆಯಿಂದಾಗಿ ನಿತ್ಯ ಅಪಘಾತ ಸಂಭವಿಸುತ್ತಿದೆ. ಇತ್ತೀಚೆಗಷ್ಟೇ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಪುರಸಭೆಯ ಸಿಬ್ಬಂದಿ ಮೃತಪಟ್ಟಿದ್ದರು. ವೇಗನಿಯಂತ್ರಣ ಕಡಿವಾಣಕ್ಕೆ ಇಲ್ಲಿ ರಸ್ತೆ ಉಬ್ಬುಗಳನ್ನು ಹಾಕಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಪಟ್ಟಣದ ವ್ಯಾಪ್ತಿಯಲ್ಲಿ ವಾಹನ ಸವಾರರು ಅತಿ ಕಡಿಮೆ ವೇಗದಲ್ಲಿ ಸಂಚರಿಸಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಆದರೆ ವಾಹನ ಸವಾರರು ಈ ಯಾವುದೇ ನಿಯಮ ಪಾಲಿಸುತ್ತಿಲ್ಲ. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವವರಿಗೆ, ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಓಡಿಸುವವರಿಗೆ ಪೊಲೀಸ್ ಭಯ ಇಲ್ಲ. ಕಾನೂನು ಉಲ್ಲಂಘಿಸುವವರಿಗೆ ದಂಡ ಹಾಕುತ್ತಿಲ್ಲ ಎಂದು ಜನರು ದೂರಿದ್ದಾರೆ.

ಎಲ್ಲೆಂದರಲ್ಲಿ ವಾಹನ ನಿಲುಗಡೆ: ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಹಾಗೂ ಒತ್ತುವರಿಯಿಂದ ಜನರು ನಡುರಸ್ತೆಯಲ್ಲಿ ಪ್ರಾಣಭಯದಿಂದ ಸಂಚರಿಸುತ್ತಿದ್ದಾರೆ. ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದಂಡ ವಿಧಿಸಬೇಕು ಎಂದು ಹಿರಿಯ ವಕೀಲ ಎ.ಜಿ. ಸುಧಾಕರ್ ಒತ್ತಾಯಿಸಿದ್ಆರೆ.

ಕಿರಿಕಿರಿ ತಪ್ಪಿಸಿ: ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಪಾದಚಾರಿ ರಸ್ತೆ ಒತ್ತುವರಿ, ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ರಸ್ತೆಯಲ್ಲಿ ಜನರು ಸಂಚರಿಸಲು ಆಗುತ್ತಿಲ್ಲ. ಮುಖ್ಯರಸ್ತೆಯಲ್ಲಿ ‘ಯೂಟರ್ನ್‌’ ಇರುವೆಡೆ ವೇಗನಿಯಂತ್ರಕ ಅಳವಡಿಸಿ
ಬೇಕು. ಹಂಪ್‌ ಹಾಕಿಸಬೇಕು. ಪೊಲೀಸರು ಗಮನಹರಿಸಿ ಅಪಘಾತ ತಪ್ಪಿಸಬೇಕು ಎಂದು ಪಟ್ಟಣದ ನಿವೃತ್ತ ಶಿಕ್ಷಕ ಅಲ್ಲಾಬಕಾಷ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.