ಚಿಕ್ಕಬಳ್ಳಾಪುರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ರವಿಕುಮಾರ್, ‘ಜಿಲ್ಲಾ ಕೇಂದ್ರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಸಾವಿರಾರು ರೈತರು ಭೇಟಿ ನೀಡುತ್ತಾರೆ. ಲಕ್ಷಗಟ್ಟಲೇ ವಹಿವಾಟು ನಡೆಯುತ್ತದೆ. ನೂರಾರು ವರ್ತಕರು ವ್ಯಾಪಾರ ಮಾಡುತ್ತಾರೆ. ಆದರೆ ಈವರೆಗೆ ಮಾರುಕಟ್ಟೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕೆಲಸವಾಗಿಲ್ಲ’ ಎಂದು ಹೇಳಿದರು.
‘ಮಾರುಕಟ್ಟೆ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇರುವ ಸಂಪುಗಳಲ್ಲಿ ಹುಳಗಳು ಹರಿದಾಡುತ್ತಿವೆ. ಹದಗೆಟ್ಟ ಮತ್ತು ಕಿರಿದಾದ ರಸ್ತೆಗಳಿಂದಾಗಿ ನಿತ್ಯ ಮಾರುಕಟ್ಟೆ ಒಳಗೆ ಮತ್ತು ಹೊರಗೆ ವಾಹನ ದಟ್ಟಣೆ ಉಂಟಾಗಿ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಶೌಚಾಲಯವಂತೂ ಸರಿಯಾದ ನಿರ್ವಹಣೆ ಇಲ್ಲದೆ ದುರ್ವಾಸನೆ ಬೀರುತ್ತಿವೆ. ಜಿಲ್ಲಾಧಿಕಾರಿ ಅವರು ಮಾರುಕಟ್ಟೆ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಕರವೇ ಪದಾಧಿಕಾರಿಗಳಾದ ಲೋಕೇಶ್, ಎಸ್ ರುಕ್ಮಿಣಿ, ನವೀನ್ ಕುಮಾರ್, ಸುಮಿತ್ರಮ್ಮ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.